ದ.ಕ.ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಕಡಿವಾಣ ಹಾಕಲು ಮುಸ್ಲಿಂ ಲೀಗ್ ಮನವಿ
ಮಂಗಳೂರು, ಎ.7: ದ.ಕ.ಜಿಲ್ಲಾದ್ಯಂತ ಮುಸ್ಲಿಮರ ಮೇಲೆ ನಡೆಯುತ್ತಿರುವ ಗುಂಪುಹಲ್ಲೆ, ಕೊಲೆ, ಮತ್ತಿತರ ಕ್ರಿಮಿನಲ್ ಕೃತ್ಯಗಳನ್ನು ತಡೆಗಟ್ಟಿ ಶಾಂತಿ-ಸೌಹಾರ್ದ ಕಾಪಾಡಬೇಕು ಮತ್ತು ಶಾಂತಿಸಭೆಯನ್ನು ನಡೆಸಬೇಕು ಎಂದು ದ.ಕ.ಜಿಲ್ಲಾ ಮುಸ್ಲಿಂ ಲೀಗ್ನ ನಿಯೋಗ ದ.ಕ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ರೂಪಾ ಎಂಜೆ ಅವರನ್ನು ಭೇಟಿಯಾದ ನಿಯೋಗವು ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಯಿಂದ ಮುಸ್ಲಿಂ ಸಮಾಜ ಭಯಭೀತಿಗೊಳಗಾಗಿದೆ. ಅಸುರಕ್ಷಿತ ಭಾವನೆ ಶುರುವಾಗಿದೆ. ಶಾಂತಿ ಕೆಡಿಸಲು ದುಷ್ಕರ್ಮಿಗಳು ಪ್ರಯತ್ನಿಸುತ್ತಿದ್ದಾರೆ. ಇಂತಹವನ್ನು ಗುರುತಿಸಿ ಗರಿಷ್ಠ ಮಟ್ಟದ ಶಿಕ್ಷೆಗೊಳಪಡಿಸಬೇಕು ಎಂದು ಮುಸ್ಲಿಂ ಲೀಗ್ ನಿಯೋಗ ಒತ್ತಾಯಿಸಿದೆ.
ಮನವಿಯ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ, ನಗರ ಪೊಲೀಸ್ ಆಯುಕ್ತರಿಗೆ, ದ.ಕ.ಜಿಲ್ಲಾ ಎಸ್ಪಿಗೂ ನಿಯೋಗ ನೀಡಿದೆ. ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ನ್ಯಾಯವಾದಿ ಎಸ್.ಸುಲೈಮಾನ್, ಮುಖಂಡರಾದ ಎಎಸ್ಇ ಕರೀಂ ಕಡಬ, ಎಚ್.ಮುಹಮ್ಮದ್ ಇಸ್ಮಾಯೀಲ್, ರಿಯಾಝ್ ಹರೇಕಳ, ಅಬ್ದುಲ್ ಖಾದರ್ ಜೆಪ್ಪು ನಿಯೋಗದಲ್ಲಿದ್ದರು.