ಉಡುಪಿ-ಮಣಿಪಾಲದಲ್ಲಿ 5 ಚೆಕ್ಪೋಸ್ಟ್: ಎಸ್ಪಿ ವಿಷ್ಣುವರ್ಧನ್
ಕೊರೋನ ರಾತ್ರಿ ಕರ್ಫ್ಯೂ
ಉಡುಪಿ, ಎ.10: ಹೆಚ್ಚುತ್ತಿರುವ ಕೊರೋನ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಉಡುಪಿ ಮತ್ತು ಮಣಿಪಾಲದಲ್ಲಿ ವಿಧಿಸಲಾದ ಕೊರೋನ ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ಒಟ್ಟು ಐದು ಕಡೆಗಳಲ್ಲಿ ತಾತ್ಕಾಲಿಕ ಚೆಕ್ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ರಾತ್ರಿ ಕರ್ಫ್ಯೂ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮಲ್ಪೆ, ಉಡುಪಿ, ಮಣಿಪಾಲದಲ್ಲಿ ಐದು ಕಡೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಲಾಗಿದೆ. ಅದೇ ರೀತಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಒಬ್ಬರು ಡಿವೈಎಸ್ಪಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ರಾತ್ರಿ 10 ಗಂಟೆ ನಂತರ ಸಾರ್ವಜನಿಕರು ಕರ್ಫ್ಯೂ ಜಾರಿ ಇರುವ ಪ್ರದೇಶದಲ್ಲಿ ಸಂಚರಿಸದೆ ಸರಕಾರದ ಆದೇಶವನ್ನು ಪಾಲಿಸಬೇಕು. ನಿಯಮ ಮೀರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಂದಿನಂತೆ ರಾತ್ರಿ ಗಸ್ತು, ಬೀಟ್ ಪೊಲೀಸ್ ವ್ಯವಸ್ಥೆ ನಿಗಾ ಇಡಲಿದೆ ಎಂದು ಎಸ್ಪಿ ತಿಳಿಸಿದರು.