ಸಾಸ್ತಾನ: ಶತಮಾನೋತ್ಸವ ಸಂಭ್ರಮ ನಮ್ಮೊಳಗಿನ ವಿಶ್ವಾಸ ಬಲಪಡಿಸಲು ದಾರಿ; ಉಡುಪಿ ಬಿಷಪ್
ಸಾಸ್ತಾನ ಚರ್ಚ್ ಶತಮಾನೋತ್ಸವ ಸಂಭ್ರಮ
ಉಡುಪಿ, ಎ.14: ಶತಮಾನೋತ್ಸವ ಸಂಭ್ರಮ ನಮ್ಮೊಳಗಿನ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸಲು ಒಂದು ದಾರಿಯಾಗಿದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನಿಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಬುಧವಾರ ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮದ ಪವಿತ್ರ ಬಲಿಪೂಜೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿ ಅವರು ಮಾತನಾಡುತಿದ್ದರು. ಬಲಿಪೂಜೆಯಲ್ಲಿ ಪ್ರವಚನ ನೀಡಿದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಪೀಟರ್ ಪಾವ್ಲ್ ಸಲ್ಡಾನ, ನೂರು ವರ್ಷಗಳ ಹಿಂದೆ ಬಿತ್ತಿದ ವಿಶ್ವಾಸ ಮತ್ತು ಮತ್ತು ನಂಬಿಕೆಯ ಬೀಜ ಇಂದು ಮರವಾಗಿ ಬೆಳೆದು ನಿಂತಿದೆ. ಶತಮಾನೋತ್ಸವ ಸಂಭ್ರಮ ಕೇವಲ ಹೊರಗಿನ ಆಚರಣೆಯಲ್ಲ ಬದಲಾಗಿ ಆಂತರಿಕ ಶುದ್ಥತೆಯನ್ನು ಕೂಡ ಒಳಗೊಂಡಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಹಿಂದೆ ಚರ್ಚಿನಲ್ಲಿ ಸೇವೆ ನೀಡಿದ ವಂ.ಹೆರಾಲ್ಡ್ ಪಿರೇರಾ, ಮೊನ್ಸಿಂಜ್ಞೊರ್ ಎಡ್ವಿನ್ ಸಿ.ಪಿಂಟೊ, ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ.ವಲೇರಿಯನ್ ಮೆಂಡೊನ್ಸಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ.ಸ್ಟ್ಯಾನಿ ತಾವ್ರೋ, ಮಾಜಿ ವಲಯ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜ, ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟ್ಯಾನಿ ಬಿ.ಲೋಬೊ, ಮಿಶೊನರಿ ಸಿಸ್ಟರ್ಸ್ ಆಫ್ ಅಜ್ಮೀರ್ ಸಂಸ್ಥೆಯ ಪ್ರತಿನಿಧಿ ಸಿಸ್ಟರ್ ಮಿಶೆಲ್, ಶತಮಾನೋತ್ಸವ ಆಚರಣಾ ಸಮಿತಿಯ ಸಂಚಾಲಕ ಡೆರಿಕ್ ಡಿಸೋಜ, ದಾನಿ ತಿಯೋದರ್ ಫುರ್ಟಾಡೊ ಅವರನ್ನು ಸನ್ಮಾನಿಸಲಾಯಿತು.
ನಿತ್ಯ ಪ್ರಾರ್ಥನಾ ವಿಧಿಯ ನೂತನ ಪುಸ್ತಕ ಹಾಗೂ ಬಲಿಪೂಜೆಯ ವೇಳೆ ಉಪಯೋಗಿಸಿ ಭಕ್ತಿಗೀತೆಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ರಾಕ್ಣೊ ಪತ್ರಿಕೆಯ ಸಂಪಾದಕರಾದ ವಂ.ವಲೇರಿಯನ್ ಫೆರ್ನಾಂಡಿಸ್, ಸ್ಥಳೀಯ ಸಂತ ಥೋಮಸ್ ಸೀರಿಯನ್ ಚರ್ಚಿನ ಧರ್ಮಗುರು ವಂ.ನೊಯೆಲ್ ಲೂವಿಸ್, ಮಿಶೊನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ವೆರೊನಿಕಾ ಬ್ರಿಟ್ಟೊ, ಜೀಸಸ್ ಮೇರಿ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಗೊರೆಟ್ಟಿ ಕುಟಿನ್ಹೊ ಉಪಸ್ಥಿತರಿದ್ದರು.
ಸಾಸ್ತಾನ ಚರ್ಚಿನ ಧರ್ಮಗುರು ವಂ.ಜಾನ್ ವಾಲ್ಟರ್ ಮೆಂಡೊನ್ಸಾ ಸ್ವಾಗತಿಸಿ, ಚರ್ಚ್ ಸಮಿತಿಯ ಕಾರ್ಯದರ್ಶಿ ಲೂಯಿಸ್ ಮ್ಯಾಕ್ಷಿಮ್ ಡಿಸೋಜಾ ವರದಿ ಮಂಡಿಸಿದರು. 18 ಆಯೋಗಗಳ ಸಂಯೋಜಕ ಜಾನೆಟ್ ಬಾಂಜ್ ವಂದಿಸಿರು. ಆಲ್ವಿನ್ ಅಂದ್ರಾದೆ ಮತ್ತು ಗ್ಲ್ಯಾನಿಸ್ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.