ಉಡುಪಿ: ಬೈಕ್ ಕಳವು ಆರೋಪಿಯ ಬಂಧನ
ಉಡುಪಿ, ಎ.15: ಬೈಕ್ ಕಳವು ಆರೋಪಿಯೊಬ್ಬನ್ನು ಉಡುಪಿ ನಗರ ಪೊಲೀಸರು ಉಡುಪಿಯ ಐರೋಡಿಕರ್ ಜಂಕ್ಷನ್ ಬಳಿಯ ತಲ್ಲೂರು ವೈನ್ಸ್ ಎದುರು ಎ.14ರಂದು ಬಂಧಿಸಿದ್ದಾರೆ.
ಬೆಳಗಾಂ ಜಿಲ್ಲೆಯ ಹುಕ್ಕೇರಿಯ ಸಾಗರ್ ಸುದೀರ್ ಹರ್ಗಾಪುರೆ(26) ಬಂಧಿತ ಆರೋಪಿ. ಬಂಧಿತನಿಂದ ಫೆ.24ರಂದು ಅಜ್ಜರಕಾಡು ಭುಜಂಗ ಪಾರ್ಕ್ ಬಳಿ ಕಳವು ಮಾಡಿದ್ದ ಬಸವರಾಜ್ ಎಂಬವರ ಪಲ್ಸರ್ ಬೈಕ್ ಹಾಗೂ ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಲಾದ ಬೈಕ್ನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಿಎಸ್ಸಿ ಪದವಿಯಲ್ಲಿ ಅನುತ್ತೀರ್ಣನಾಗಿದ್ದ ಈತ ಮಂಗಳೂರು ಮತ್ತು ಉಡುಪಿಯಲ್ಲಿ ಕೆಲವು ಖಾಸಗಿ ಮಾಲ್ಗಳಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದನು. ಉಡುಪಿಯ ಚಾರ್ವಿ ಪಿ.ಜಿಯಲ್ಲಿ ವಾಸವಾಗಿದ್ದ ಈತ, ಕೀ ಸಮೇತವಾಗಿ ಬಿಟ್ಟು ಹೋಗುವ ಬೈಕ್ಗಳನ್ನು ಕಳವು ಮಾಡುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಶಾಖೆಯ ಪೊಲೀಸ್ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಸಿಬ್ಬಂದಿಯವರಾದ ಮರಿಗೌಡ, ಜೀವನ್, ಸಂತೋಷ ರಾಠೋಡ್, ಮಾಲ್ತೇಶ್ ಈ ಕಾರ್ಯಾಚರಣೆ ನಡೆಸಿದ್ದಾರೆ.