ಕುಕ್ಕಾಜೆಯ ಮನೆಯೊಂದರಲ್ಲಿ 6 ಮಂದಿಗೆ ಕೋವಿಡ್: ಕಂಟೈನ್ಮೆಂಟ್ ವಲಯ ಘೋಷಣೆ
ದ.ಕ. ಜಿಲ್ಲೆಯ 272 ಮಂದಿಗೆ ಸೋಂಕು ದೃಢ
ಮಂಗಳೂರು, ಎ.18: ದ.ಕ.ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರವಿವಾರ 272 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೋನ ಗುಣಮುಖರಾಗಿ 131 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ 1,764 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಕುಕ್ಕಾಜೆಯ ಮನೆಯೊಂದರಲ್ಲಿ ಆರು ಮಂದಿಗೆ ಕೊರೋನ ಪಾಸಿಟಿವ್ ಆಗಿದ್ದು, ಆ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
ಕೋವಿಡ್ ವಾರ್ ರೂಮ್ ಪುನಃಸ್ಥಾಪನೆ: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಹಿಂದಿದ್ದ ಕೋವಿಡ್ ವಾರ್ ರೂಮ್ನ್ನು ಮರು ಸ್ಥಾಪಿಸಲಾಗಿದೆ. ಕಳೆದ ವರ್ಷ ಕೋವಿಡ್ ಆರಂಭದಲ್ಲಿ ಇದನ್ನು ಸ್ಥಾಪಿಸಲಾಗಿತ್ತು. ವಿಶೇಷವಾಗಿ ಬೆಡ್ ಮ್ಯಾನೇಜ್ಮೆಂಟ್, ಆ್ಯಂಬುಲೆನ್ಸ್ ಸೇವೆ, ಕೋವಿಡ್ ಸೋಂಕಿತರ ಪತ್ತೆ ಸಹಿತ ಕೋವಿಡ್ ಸಂಬಂಧಿತ ಚಟುವಟಿಕೆಗಳು ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿಯ ನೇತೃತ್ವದಲ್ಲಿ ಇಲ್ಲಿ ನಡೆಯಲಿದೆ. ಈ ಹಿಂದೆ ಜಿಲ್ಲೆಯ ಮೆಡಿಕಲ್ ಕಾಲೇಜುಗಳ ಕಮ್ಯೂನಿಟಿ ಮೆಡಿಸಿನ್ ವಿಭಾಗದವರಿಗೆ ಇದರ ಹೊಣೆಗಾರಿಕೆ ನೀಡಲಾಗಿತ್ತು.
ವಿಶೇಷ ಸಭೆ: ನಗರದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಗೆ ಕಡಿವಾಣ ಹಾಕುವ ಸಲುವಾಗಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಲು ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ರವಿವಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ದ.ಕ. ಜಿಪಂ ಸಿಇಒ ಡಾ.ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಡಿಎಚ್ಒ ಡಾ. ಕಿಶೋರ್ ಕುಮಾರ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.