ಸಿಡಿಲು ಬಡಿದು ಜಾನುವಾರು ಮೃತ್ಯು; ಮನೆಗಳಿಗೆ ಹಾನಿ
ಉಡುಪಿ, ಎ.22: ಕಳೆದೆರಡು ದಿನಗಳ ಗುಡುಗು-ಸಿಡಿಲು ಹಾಗೂ ಮಳೆಯಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿ ರುವ ಬಗ್ಗೆ ವರದಿಯಾಗಿದೆ. ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಸದಾಶಿವ ಎಂಬವರ ಮನೆಯ ಜಾನುವಾರ ಸಿಡಿಲು ಬಡಿದು ಮೃತಪಟ್ಟಿದ್ದು 25,000ರೂ. ನಷ್ಟ ಸಂಭವಿಸಿದೆ.
ಕಾರ್ಕಳ ತಾಲೂಕು ಸೂಡ ಗ್ರಾಮದ ಸುಂದರ ನಾಯ್ಕ ಇವರ ವಾಸ್ತವ್ಯದ ಮನೆ ಹಾಗೂ ಪಳ್ಳಿ ಗ್ರಾಮದ ಕಲ್ಯಾಣಿ ಸಪಳ್ತಿ ಇವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿ ಸಂಭವಿಸಿದೆ. ತಲಾ 30,000ರೂ. ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಕಾಪು ತಾಲೂಕು ಕುತ್ಯಾರು ಶ್ರೀಕಾಳಿಕಾಂಬ ದೇವಸ್ಥಾನದ ಬಳಿ ಶಾರದಾ ಆಚಾರ್ಯರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವಯರಿಂಗ್ ಹಾಗೂ ವಿದ್ಯುತ್ ಉಪಕರಣಗಳು, ನಿತ್ಯಬಳಕೆಯ ವಸ್ತುಗಳು ಸಂಪೂರ್ಣ ಹಾನಿಗೊಂಡಿದ್ದು ಸುಮಾರು ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಕಾಳು ಮೂಲ್ಯರ ಮನೆ, ರಘುನಾಥ ಮೂಲ್ಯರ ಮನೆ, ಕೌಡೂರು ಗ್ರಾಮದ ಅಪ್ಪಿ ಪೂಜಾರ್ತಿ ಅವರ ಮನೆ, ನಲ್ತೂರು ಗ್ರಾಮದ ಮೋಂಟಿ ಮೇರ್ತಿ ಎಂಬವರ ವಾಸ್ತವ್ಯದ ಮನೆ ಸಿಡಿಲು, ಗಾಳಿ, ಮಳೆಯಿಂದ ಹಾನಿಗೊಂಡಿದ್ದು ಸುಮಾರು ಒಂದು ಲಕ್ಷ ರೂ. ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.
ಕಾಪು ತಾಲೂಕು ಪಾದೂರು ಗ್ರಾಮದ ವ್ಯಾಸರಾಯ ಆಚಾರಿ ಎಂಬವರ ಮನೆ ಮೇಲೆ ಮರಬಿದ್ದು 50,000ರೂ., ಬೆಳಪು ಗ್ರಾಮದ ಆಶಾ ಮಾಬೆನ್ ಅವರ ಮನೆಗೆ ಸಿಡಿಲು ಬಡಿದು ಶಾರ್ಟ್ ಸರ್ಕ್ಯೂಟ್ನಿಂದ ಅಪಾರ ಹಾನಿ ಸಂಭವಿಸಿದೆ. ಎಲ್ಲೂರು ಗ್ರಾಮದ ಸುನಂದ ಎಂಬವರ ಮನೆ ಮೇಲೆ ಅಡಿಕೆ ಮರಬಿದ್ದು ಹಾನಿಯಾಗಿದೆ.
ಉಳಿದಂತೆ ಮೂಳೂರು ಗ್ರಾಮದ ಸಿಂಧು ಮುಖಾರ್ತಿ, ಉಳಿಯಾರಗೋಳಿ ಗ್ರಾಮದ ಜಲಜ ಗೋಪಾಲ ಪೂಜಾರಿ, ಎಲ್ಲೂರು ಗ್ರಾಮದ ಹಸನ್, ರೇಣುಕಾ, ಕೋಟೆ ಗ್ರಾಮದ ಕಮಲ್ದಾಸ್, ಪಾದೂರು ಗ್ರಾಮದ ಶೈಲೇಂದ್ರ, ಕಳತ್ತೂರು ಗ್ರಾಮದ ಓಸ್ವಾಲ್ಡ್, ಚಿತ್ರಾ ಶೆಟ್ಟಿ, ಶಿರ್ವ ಗ್ರಾಮದ ಕೃಷ್ಣ ಪೂಜಾರಿ, ಪಿಲಾರು ಗ್ರಾಮದ ದೇವರಾಯ ಆಚಾರ್ಯರ ಮನೆಗಳಿಗೂ ಮಳೆ, ಗಾಳಿ, ಸಿಡಿಲಿನ ಪರಿಣಾಮ ವಿವಿಧ ರೀತಿಯಿಂದ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಸಿಡಿಲಿನಿಂದ ಇಬ್ಬರಿಗೆ ಗಾಯ: ಕಾಪು ತಾಲೂಕು ಪಿಲಾರು ಗ್ರಾಮದ ದೇವರಾಯ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು 50,000ರೂ.ಗಳಿಗೂ ಮಿಕ್ಕಿ ಹಾನಿ ಸಂಭಸಿದ್ದು, ಸಿಡಿಲಿನಿಂದ ಸುರೇಖ ಹಾಗೂ ಮೀನಾಕ್ಷಿ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.