ಕುಂದಾಪುರ: ಕೋವಿಡ್ ಕರ್ಫ್ಯೂ ಗೆ ಜನರ ನಿರ್ಲಕ್ಷ್ಯ ಆರೋಪ
ಕುಂದಾಪುರ, ಎ 30: ಕರೋನ ಸೋಂಕು ತಡೆಗಟ್ಟಲು ಸರಕಾರ ಜಾರಿಗೆ ತಂದಿರುವ ಕೋವಿಡ್ ಕರ್ಫ್ಯೂ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟು, ಬಸ್ ಸಂಚಾರ ಸ್ಥಗಿತಗೊಂಡಿರುವುದು ಬಿಟ್ಟರೆ ಉಳಿದಂತೆ ಎಲ್ಲವೂ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು.
ಸರಕಾರವು ಅಗತ್ಯ ಸೇವೆಗಳಿಗೆ ವಿನಾಯತಿ ನೀಡಿದ್ದರಿಂದ ಇದನ್ನು ಬಳಸಿಕೊಂಡು ಜನತೆ ನಿರಾಳವಾಗಿ ರಸ್ತೆ ತುಂಬ ಸಂಚರಿಸುತ್ತಿರುವುದು ಕಂಡುಬಂತು. ಕೊರೋನ ಮರೆತ ಜನ ಬೆಳಿಗ್ಗೆ 10 ಗಂಟೆ ನಂತರವೂ ಯಾವುದೇ ಕೋವಿಡ್-19 ನಿಯಮಗಳನ್ನು ಪಾಲಿಸದೇ ಓಡಾಟ ನಡೆಸುತಿದ್ದರು.
ಕುಂದಾಪುರ ನಗರದೊಳಗೆ ವಾಹನಗಳು ಸಾಲು ಗಟ್ಟಿ ಹೋಗಿ ಬರುತ್ತಿದ್ದವು. ಪೊಲೀಸರು ತಡೆದರೆ ಕೋರ್ಟು, ಕಚೇರಿ, ಆಸ್ಪತ್ರೆ, ಮೆಡಿಕಲ್, ಬ್ಯಾಂಕ್, ಫೈನಾನ್ಸ್ ತುರ್ತು ಕೆಲಸ, ಮದುವೆ ಎಂದು ಕಾರಣಗಳನ್ನು ನೀಡುತಿದ್ದರು.
ಪೊಲೀಸರಿಗೆ ಗೊಂದಲ: ಬೆಳಗ್ಗೆ 10 ಗಂಟೆಯ ನಂತರ ಕೋವಿಡ್ ಕರ್ಫ್ಯೂ ಇದ್ದು ಓಡಾಟಕ್ಕೆ ನಿರ್ಬಂಧ ಇರುವುದರಿಂದ ಪೊಲೀಸರು ರಸ್ತೆಯಲ್ಲಿ ಓಡಾಡುವವರನ್ನು ತಡೆದು ತಪಾಸಣೆ ಮಾಡಿ ಸೂಕ್ತ ದಾಖಲೆಗಳು ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುತ್ತಿದ್ದರು. ಅದರಲ್ಲೂ ಆಸ್ಪತ್ರೆ, ಮೆಡಿಕಲ್, ಬ್ಯಾಂಕ್, ಫೈನಾನ್ಸ್, ಕೋರ್ಟು, ಸರಕಾರಿ ಕಛೇರಿಗೆ, ಮದುವೆಗೆ, ತುರ್ತು ಸೇವೆಗೆ, ಕೂಲಿ ಕೆಲಸಕ್ಕೆ ಎಂದು ಒಂದಲ್ಲ ಒಂದು ಕಾರಣಗಳನ್ನು ನೀಡಿ ಸಂಚರಿಸುತಿದ್ದ ಜನರನ್ನು ನೋಡಿ ಪೊಲೀಸರು ಯಾರನ್ನು ಬಿಡುವುದು ಯಾರನ್ನು ತಡೆಯುವುದು ಎಂಬ ಗೊಂದಲಕ್ಕೆ ಸಿಲುಕಿದಂತೆ ಕಂಡುಬಂದರು.