ಸರಕಾರದ ಹೊಸ ಮಾರ್ಗಸೂಚಿಯ ಬಗ್ಗೆ ಶನಿವಾರ ಸಭೆ: ಸಚಿವ ಕೋಟ
ಮಂಗಳೂರು, ಮೇ 7: ಕೋವಿಡ್ ನಿಗ್ರಹಕ್ಕಾಗಿ ದ.ಕ.ಜಿಲ್ಲಾಡಳಿತವು ಈಗಾಗಲೆ ಮೇ 6ರ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಮಾತ್ರ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಿತ್ತು. ಅಲ್ಲದೆ ಶನಿವಾರ ಹಾಗೂ ರವಿವಾರ ವಾರಾಂತ್ಯದ ಕರ್ಫ್ಯೂ ಹೇರಿ ಆದೇಶಿಸಿತ್ತು. ಈ ಮಧ್ಯೆ ರಾಜ್ಯ ಸರಕಾರವು ಶುಕ್ರವಾರ ಸಂಜೆ ಹೊಸ ಆದೇಶ ಹೊರಡಿಸಿ ಮೇ 10ರ ಬೆಳಗ್ಗೆ 6ರಿಂದ 24ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಏನೇನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಶನಿವಾರ ಸಭೆ ಕರೆದು ತೀರ್ಮಾನಕ್ಕೆ ಬರಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ರಾಜ್ಯ ಸರಕಾರ ಎರಡು ವಾರ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದು, ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಸಮಯವಕಾಶ ನೀಡಿದೆ. ಜಿಲ್ಲೆಯಲ್ಲಿ ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಶನಿವಾರ ಜಿಲ್ಲಾಧಿಕಾರಿ, ಸಂಸದರು, ಶಾಸಕರ ಜೊತೆ ಸಮಾ ಲೋಚಿಸಿ ತೀರ್ಮಾನಕ್ಕೆ ಬರಲಾಗುವುದು. ಈಗಾಗಲೆ ಘೋಷಿಸಲಾದ ವಾರಾಂತ್ಯದ ಕರ್ಫ್ಯೂ ಆದೇಶ ಸದ್ಯ ಮುಂದುವರಿಯಲಿದೆ ಎಂದರು.