ಉಡುಪಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಟೀಕೆ
ಉಡುಪಿ, ಮೇ 8: ಕೊರೋನಾ ಮಹಾಮಾರಿಯಿಂದ ಜನ ಬದುಕಿಗಾಗಿ ಹೋರಾಡುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸಿಲ್ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ. ಇದೊಂದು ಕರುಣೆಯಿಲ್ಲದ ಜನ ವಿರೋಧಿ ಸರಕಾರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ಕುಮಾರ್ ಕೊಡವೂರು ಹೇಳಿದ್ದಾರೆ.
ಶನಿವಾರ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯೊಂದರಲ್ಲಿ ಸರಕಾರದ ಈ ನಿಲುವನ್ನು ಖಂಡಿಸಿದ್ದು, ವಿಶ್ವ ಮಾರಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಮತ್ತು ರೂಪಾಯಿ ಎಂದು ಎದುರು ಡಾಲರ್ ವೌಲ್ಯ ಯಥಾಸ್ಥಿತಿ ಕಾಯ್ದು ಕೊಂಡಿದ್ದರೂ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಲೀಟರಿಗೆ ಸರಿ ಸುಮಾರು 28 ಪೈಸೆ ಹಾಗೂ 32 ಪೈಸೆ ಏರಿಸುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಇದರಿಂದ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಸ್ಥಳೀಯ ವ್ಯತ್ಯಯದೊಂದಿಗೆ ಕನಿಷ್ಟ 92.67ರೂ.ನಿಂದ ಗರಿಷ್ಟ 97.58 ರೂ.ವರೆಗೆ ಏರಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಲಿದೆ ಎಂದಿದ್ದಾರೆ.
ರಾಜ್ಯದಲ್ಲಿ 2018ರ ಪ್ರಕೃತಿ ವಿಕೋಪದಡಿ ರೈತರ ಸಾಲ ಮನ್ನಾ ಮಾಡಲು ಹೇರಿದ್ದ ಶೇ. ಸೆಸ್ಸನ್ನು ಈಗಲೂ ಮುಂದುವರಿಸಲಾಗುತ್ತಿದ್ದು ಅದನ್ನು ಕೂಡಲೇ ತಡೆ ಹಿಡಿದು ಕೊರೋನಾ ಸಂಕಷ್ಟ ನಿಧಿಗೆ ಆ ಹಣವನ್ನು ವರ್ಗಾಯಿಸಬೇಕು ಎಂದವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.