ಶಂಕರನಾರಾಯಣ: ಬಾಲಕಿಗೆ ಲೈಂಗಿಕ ಕಿರುಕುಳ; ಬಿಹಾರ ಮೂಲದ ಕಾರ್ಮಿಕನ ವಿರುದ್ಧ ದೂರು
ಶಂಕರನಾರಾಯಣ: ಇಲ್ಲಿನ ಬೈಲೂರು ನಿವಾಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಿಹಾರ ಮೂಲದ ಕಾರ್ಮಿಕನ ವಿರುದ್ಧ ದೂರು ದಾಖಲಾಗಿದೆ.
ಆರೋಪಿ ನಿರಂಜನ್ (30) ವಿರುದ್ಧ ಪೊಕ್ಸೋ ಕಾಯ್ದೆ ಅಡಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
15 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಗರ್ಭಿಣಿ ಆಗಿರುವ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ದೂರಿನಂತೆ ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಅಂಗನವಾಡಿ ಮೇಲ್ವಿಚಾರಕಿ ಭಾಗ್ಯವತಿ ಅವರು ಅಪ್ರಾಪ್ತ ಬಾಲಕಿ ಇರುವ ಕಾರ್ಮಿಕರ ಶೆಡ್ ಗೆ ಭೇಟಿ ನೀಡಿ ಸಮಾಲೋಚನೆ ನಡೆಸಿ, ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಹಾಗೂ ಗರ್ಭಿಣಿ ಆಗಿರುವ ಬಗ್ಗೆ ಮಾಹಿತಿ ಪಡೆದು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಂಕರನಾರಾಯಣ ಠಾಣೆ ಸಬ್ ಇನ್ಸ್ ಪೆಕ್ಟರ್ ಶ್ರೀಧರ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಸದ್ಯ ಬಾಲಕಿಯ ಪೋಷಕರು ಇಲ್ಲದೆ ಇರುವುದರಿಂದ ಅವಳ ರಕ್ಷಣೆ ಮತ್ತು ಪೋಷಣೆ ಹಿತದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಫುರ್ಟಾಡೋ ಅವರ ನಿರ್ದೇಶನದಂತೆ ಬಾಲಕಿಯರ ಬಾಲಮಂದಿರ ನಿಟ್ಟೂರು ಇಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.