ಕೋವಿಡ್-19: ಸೇವಾ ನಿರತ ಸಂಘ ಸಂಸ್ಥೆಗಳು ಮಾಹಿತಿ ಹಂಚಿಕೊಳ್ಳಲು ದ.ಕ. ಜಿಲ್ಲಾಡಳಿತ ಸೂಚನೆ
ಮಂಗಳೂರು, ಮೇ 12: ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ಕೆಲವು ಸಂಘಸಂಸ್ಥೆಗಳು ಮುಂಚೂಣಿಯ ಪಾತ್ರ ವಹಿಸುತ್ತಿದ್ದು, ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಈ ಬಗ್ಗೆ ಜಿಲ್ಲಾಡಳಿತಕ್ಕೆ ಪೂರಕ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯ ಕೋವಿಡ್ ಸೋಂಕಿತರು, ಕ್ವಾರಂಟೈನ್ ಕೇಂದ್ರಗಳಲ್ಲಿ ಆರೈಕೆ ಪಡೆಯುತ್ತಿರುವ ವ್ಯಕ್ತಿಗಳು, ವಲಸೆ ಕಾರ್ಮಿಕರು, ನಿರಾಶ್ರಿತರು ಮುಂತಾದವರಿಗೆ ಹಲವಾರು ಮಂದಿ ವೈಯಕ್ತಿಕವಾಗಿ ಅಥವಾ ಸರಕಾರೇತರ ಸಂಘ ಸಂಸ್ಥೆಗಳು ಆಹಾರದ ಕಿಟ್, ಊಟೋಪಚಾರ ಒದಗಿಸುತ್ತಿರುವುದು ಪ್ರಶಂಸನೀಯವಾಗಿದೆ. ಆದರೆ ಕೆಲವು ಪ್ರದೇಶಗಳಲ್ಲಿ ಅಧಿಕ ಆಹಾರ ವಿತರಿಸುತ್ತಿರುವುದು ಮತ್ತು ಕೆಲವು ಸಂಘ ಸಂಸ್ಥೆಗಳು ನಿಷ್ಕ್ರಿಯವಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಇಂತಹ ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಸುವ್ಯವಸ್ಥಿತ ರೀತಿಯಲ್ಲಿ ಅಗತ್ಯವುಳ್ಳವರಿಗೆ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯಪ್ರವೃತ್ತರಾಗಬೇಕಿದೆ. ಹಾಗಾಗಿ ಆಹಾರ ಪೂರೈಸಲು ಆಸಕ್ತಿಯಿರುವ ವೈಯಕ್ತಿಕ/ಸರಕಾರೇತರ ಸಂಘಸಂಸ್ಥೆಗಳು ವಿವರಗಳನ್ನು ಜಿಲ್ಲಾಧಿಕಾರಿಯ ಕಚೇರಿಗೆ ಮೇ 14ರ ಸಂಜೆ 5ಗಂಟೆಯೊಳಗೆ ಈ https://forms.gle/uT21RQii5Kv2y9429 ಲಿಂಕ್ ಮೂಲಕ ಭರ್ತಿ ಮಾಡಿ ಸಲ್ಲಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9945427339ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.