ಕೋವಿಡ್ ಪರಿಹಾರ ಘೋಷಿಸಲು ಕಟ್ಟಡ ಕಾರ್ಮಿಕರ ಪ್ರತಿಭಟನೆ
ಕುಂದಾಪುರ, ಮೇ 16: ಕೋವಿಡ್ ಎರಡನೆ ಅಲೆಗೆ ನಿರುದ್ಯೋಗಿಗಳಾಗಿರುವ ಕಟ್ಟಡ ಕಾರ್ಮಿಕರಿಗೆ ಮುಂದಿನ ಮೂರು ತಿಂಗಳ ವರೆಗೆ ಪ್ರತಿ ತಿಂಗಳು 10 ಸಾವಿರ ರೂ. ಜಮೆ ಮಾಡಬೇಕೆಂದು ಆಗ್ರಹಿಸಿ ಶನಿವಾರ ಕುಂದಾಪುರ ತಾಲೂಕಿನಾದ್ಯಂತ ಕಟ್ಟಡ ಕಾರ್ಮಿಕರು ಮನೆ ಮನೆ ಗಳಲ್ಲಿ ಪ್ರತಿಭಟನೆ ನಡೆಸಿದರು.
ಈ ಹಿಂದಿನ ವರ್ಷ ಕಲ್ಯಾಣ ಮಂಡಳಿಯು ಕರೋನ ಪರಿಹಾರ 5000 ರೂ. ಜಮೆ ಮಾಡುವಾಗ ನಿರ್ಲಕ್ಷ್ಯ ವಹಿಸಿದ ಪರಿಣಾಮ 1.26ಲಕ್ಷ ಜನರಿಗೆ ಜಮೆಯಾಗಿರಲಿಲ್ಲ. ಆ ಹಣವನ್ನೂ ಕೂಡ ಜಮೆ ಮಾಡಬೇಕು. ಲಾಕ್ಡೌನ್ ನಿಂದ ಅರ್ಜಿ ಸಲ್ಲಿಸಲು ಬಾಕಿ ಇರುವ ಎಲ್ಲಾ ಅರ್ಜಿಗಳಿಗೆ ಮುಂದಿನ ಮೂರು ತಿಂಗಳ ವರೆಗೆ ಅವಕಾಶ ವಿಸ್ತರಿಸಬೇಕು ಎಂದು ಪ್ರತಿಭನಕಾರರು ಆಗ್ರಹಿಸಿದರು.
ರಾಜ್ಯದ ಮೂಲೆ ಮೂಲೆಯಲ್ಲಿ ಇನ್ನೂ ಮನೆಗೆ ತಲುಪದೇ ಇರುವ ಕಾರ್ಮಿಕರನ್ನು ಸರಕಾರ ಗುರುತಿಸಿ ವಸತಿ ಊಟದ ವ್ಯವಸ್ಥೆ ಮಾಡ ಬೇಕೆಂದು ಕಟ್ಟಡ ಕಾರ್ಮಿಕರು ಆಗ್ರಹಿಸಿದರು. ಬಸ್ರೂರು, ಹೆಮ್ಮಾಡಿ, ಹಾಲಾಡಿ, ಆಲೂರು, ಕೆರಾಡಿ, ಬಿದ್ಕಲ್ ಕಟ್ಟೆ, ಬೆಟ್ಟಾಗರ, ಕಾಳಾವರ ಮೊದಲಾದ ಕಡೆಗಳಲ್ಲಿ ಪ್ರತಿಭಟನೆ ನಡೆಯಿತು.
Next Story