ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಸಚಿವ ಕೋಟ ಭೇಟಿ
ಕುಂದಾಪುರ, ಮೇ 16: ಮರವಂತೆ ಮೀನುಗಾರಿಕಾ ಹೊರಬಂದರಿನ ಸಮೀಪ ಕಡಲ್ಕೊರೆತ ಮುಂದುವರೆದಿದ್ದು, ಸುಮಾರು 500ಮೀಟರ್ ವ್ಯಾಪ್ತಿ ಯಲ್ಲಿ ಕೊರೆತ ಕಂಡುಬಂದಿದೆ. ಇಲ್ಲಿನ ಕರಾವಳಿ ಮಾರ್ಗದ ಸುಮಾರು 25 ಮೀ. ಮೀನುಗಾರಿಕಾ ರಸ್ತೆ ಸಂಪೂರ್ಣ ಕುಸಿದು, ಸಂಪರ್ಕ ಕಡಿತವಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮರವಂತೆ ಮೀನುಗಾರಿಕಾ ಹೊರಬಂದರಿನ ಎದುರಿನ ಕಡಲ್ಕೊರೆತ ಸಂಭವಿ ಸಿದ ಪ್ರದೇಶಕ್ಕೆ ರವಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತ ನಾಡುತಿದ್ದರು. ಮರವಂತೆ ಬೀಚ್ ಬಳಿ ಹೆದ್ದಾರಿ ರಕ್ಷಣೆಗೆ ಕೈಗೊಂಡ ಸುಸ್ಥಿರ ಕಡಲತೀರ ಸಂರಕ್ಷಣಾ ಯೋಜನೆ ಮಾದರಿಯನ್ನು ಅನುಷ್ಠಾನಿಸಲು ಮುಖ್ಯ ಮಂತ್ರಿಗಳಿಗೆ ವುನವಿ ಸಲ್ಲಿಸಲಾಗುವುದು ಎಂದರು.
ಸುಸ್ಥಿರ ಯೋಜನೆ ಅನುಷ್ಠಾನ ಆಗುವವರೆಗೆ ಈ ಪ್ರದೇಶದಲ್ಲಿ ಇನ್ನಷ್ಟು ಹಾನಿಯಾಗುವುದನ್ನು ತಡೆಯಲು ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಮುಖ್ಯಮಂತ್ರಿಗಳನ್ನು ವಿನಂತಿಸಲಾಗುವುದು. ಹಾನಿಯ ಹಿನ್ನೆಲೆಯಲ್ಲಿ ಸಂತ್ರಸ್ತ ರಿಗೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದಭರ್ದಲ್ಲಿ ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಮರವಂತೆ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಮಾಜಿ ಅಧ್ಯಕ್ಷೆ ಅನಿತಾ ಆರ್.ಕೆ., ಮೀನುಗಾರ ಮುಖಂಡರಾದ ಮೋಹನ ಖಾರ್ವಿ, ಸೋಮಯ್ಯ ಖಾರ್ವಿ, ಚಂದ್ರ ಖಾರ್ವಿ ಉಪಸ್ಥಿತರಿದ್ದರು.
ಡಿಸಿ, ಶಾಸಕರ ಭೇಟಿ: ಮರವಂತೆ ಹಾಗೂ ಕಂಚುಗೋಡಿನ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬಂದರು ಇಲಾಖೆಯ ನಿರ್ದೇಶಕ ಕ್ಯಾ.ಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್ ಸಾಯದೇ, ಅಸಿಸ್ಟೆಂಟ್ ಎಂಜಿನಿಯರ್ ಉದಯ ಕುಮಾರ್ ಶೆಟ್ಟಿ, ಜಿಪಂ ಸಿಇಒ ಡಾ.ನವೀನ್ ಭಟ್, ಉಡುಪಿ ಎಸ್ಪಿಎನ್.ವಿಷ್ಣುವರ್ಧನ್, ಕುಂದಾಪುರ ಎಸಿ ಕೆ.ರಾಜು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.