ಕೋಡಿಕನ್ಯಾಣ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ: ಗ್ರಾಮದಲ್ಲೇ ಲಸಿಕಾ ಶಿಬಿರ
ಕೋಟ, ಮೇ 29: ಕೋಡಿಕನ್ಯಾಣ ಗಾಪಂ ವ್ಯಾಪ್ತಿಯ ಕೋಡಿ ಕನ್ಯಾಣ ಸ್ಥಳೀಯ ಪ್ರೌಢಶಾಲೆಯಲ್ಲಿ ಶನಿವಾರ ಕೋವಿಡ್ ಲಸಿಕೆ ನೀಡುವ ಶಿಬಿರವನ್ನು ಏರ್ಪಡಿಸಲಾಗಿತ್ತು.
ಈ ಹಿಂದೆ ಕೋಡಿ ಕನ್ಯಾಣದ ನಾಗರಿಕರು ಕೋವಿಡ್ ಲಸಿಕೆ ಪಡೆಯಲು 30 ಕಿ.ಮೀ. ದೂರದಲ್ಲಿರುವ ಕೋಡಿ ಬೆಂಗ್ರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾಗಿತ್ತು. ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಆದು ದರಿಂದ ಕೋಡಿಕನ್ಯಾಣದಲ್ಲೆ ಶಿಬಿರ ನಡೆಸುವಂತೆ ಗ್ರಾಪಂ ವತಿಯಿಂದ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು.
ಆದರೆ ಸಿಬ್ಬಂದಿ ಕೊರತೆ, ಮೂಲ ಸೌಕರ್ಯದ ಕೊರತೆ ಮುಂತಾದ ಕಾರಣವನ್ನು ಮುಂದಿಟ್ಟುಕೊಂಡು ಶಿಬಿರ ನಡೆಸಲು ಸಾಧ್ಯವಾಗಿರಲಿಲ್ಲ. ಗುರುವಾರ ನಡೆದ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅಲ್ಲದೆ ಸ್ಥಳೀಯರು ಪ್ರತಿಭಟನೆಗೆ ಮುಂದಾಗಿದ್ದರು. ಶುಕ್ರವಾರ ಸಾಲಿಗ್ರಾಮಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಈ ವಿಚಾರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜೂ.4 ಮತ್ತು 5ಕ್ಕೆ ನಿಗದಿಪಡಿಸಲಾದ ಲಸಿಕಾ ಕಾರ್ಯ ಕ್ರವುವನ್ನು ಇಂದಿಗೆ ನಿಗದಿಪಡಿಸಲಾಯಿತು.
ಪ್ರಥಮ ಹಂತದಲ್ಲಿ 154 ಜನರಿಗೆ ಕೊರೋನ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಪ್ರಭಾಕರ ಮೆಂಡನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆನ್ನಿ ಕ್ವಾಡ್ರಸ್, ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಚ್ಚಿದಾನಂದ ರಾವ್, ರಾಮಾನಂಜನೇಯ ವಿವಿದೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕರ್ಕೇರ ಮೊದ ಲಾದವರು ಉಪಸ್ಥಿತರಿದ್ದರು.