ಶಿರೂರು : ಜೂ.3ರಿಂದ ಜೂ.6ರವರಗೆ ಸಂಪೂರ್ಣ ಲಾಕ್ಡೌನ್
ಕೊರೋನ ನಿಯಂತ್ರಣಕ್ಕಾಗಿ ಗ್ರಾಪಂನಿಂದ ಮಹತ್ವದ ನಿರ್ಣಯ
ಬೈಂದೂರು, ಮೇ 31: ಶಿರೂರು ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜೂ.3ರಿಂದ ಜೂ.6ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಇಂದು ನಡೆದ ಶಿರೂರು ಗ್ರಾಪಂ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಶಿರೂರು ಗ್ರಾಮದಲ್ಲಿ ಕೊರೋನ ಸೋಂಕು ನಿರೀಕ್ಷಿತ ಪ್ರಮಾಣದಲ್ಲಿ ಹತೋಟಿಗೆ ಬಾರದೇ ಇರುವ ಕಾರಣ ಲಾಕ್ ಡೌನ್ ಅವಧಿಯ ಕೊನೆಯ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ ಎಂದು ಗ್ರಾಪಂ ತಿಳಿಸಿದೆ.
ಸಂಪೂರ್ಣ ಲಾಕ್ಡೌನ್ ಸಮಯದಲ್ಲಿ ಕೇವಲ ವೈದ್ಯಕೀಯ ಸೌಲಭ್ಯ ಮತ್ತು ಮೆಡಿಕಲ್ ಶಾಪ್ ಮತ್ತು ಹಾಲಿನ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಆದುದ ರಿಂದ ಗ್ರಾಪಂ ವ್ಯಾಪ್ತಿಯ ನಾಗರಿಕರು ತಮ್ಮ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿ ಗಳು, ದಿನಸಿ ಮತ್ತು ತರಕಾರಿಗಳನ್ನು ಜೂ.2ರೊಳಗೆ ಖರೀದಿಸಿ ಇಟ್ಟುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮನೆ ಬಾಗಿಲಿಗೆ ಸೇವೆ: ಪರ್ಯಾಯ ವ್ಯವಸ್ಥೆಗಾಗಿ ಲಾಕ್ಡೌನ್ ಇರುವ ನಾಲ್ಕು ದಿನದ ಅವಧಿಯಲ್ಲಿ ದಿನಸಿ ಸಾಮಾನುಗಳು ಮತ್ತು ತರಕಾರಿಗಳನ್ನು ಲೈನ್ಸೇಲ್ ಮಾಡಲಾಗುವುದು ಎಂದು ಗ್ರಾಪಂ ಪ್ರಕಟಣೆ ತಿಳಿಸಿದೆ.
ಗ್ರಾಮ ಪಂಚಾಯತ್ ಸಹಾಯವಾಣಿ ಸಂಖ್ಯೆ ಮೊ-9480878620ಗೆ ಅಥವಾ ಅಂಗಡಿಯ ಮಾಲಕರಿಗೆ ನೇರವಾಗಿ ಕರೆ ಮಾಡಿ ಅವರಿಂದ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿ ದಿನಸಿ, ತರಕಾರಿಗಳನ್ನು ತಮ್ಮ ತಮ್ಮ ಮನೆಗೆ ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಪೂರ್ಣ ಲಾಕ್ಡೌನ್ ಉದ್ದೇಶವನ್ನು ಸಾಕಾರಗೊಳಿಸಿ ಕೊರೋನದಿಂದ ಶಿರೂರು ಗ್ರಾಮವನ್ನು ಮುಕ್ತಗೊಳಿಸಲು ಪ್ರಜ್ಞಾವಂತ ನಾಗರಿಕರು ಸಹಕರಿಸಬೇಕು. ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಶೆಟ್ಟಿ ತಿಳಿಸಿದ್ದಾರೆ.
150 ಸಕ್ರಿಯ ಕೊರೋನ ಪ್ರಕರಣಗಳು
ಶಿರೂರು ಗ್ರಾಪಂ ವ್ಯಾಪ್ತಿಯಲ್ಲಿ ಮೇ 31ರವರೆಗೆ ಒಟ್ಟು 150 ಕೊರೋನ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 12 ಮಂದಿ ಆಸ್ಪತ್ರೆಯಲ್ಲಿ ಹಾಗೂ ಉಳಿದ ವರು ಹೋಮ್ ಐಸೋಲೇಷನ್ನಲ್ಲಿದ್ದಾರೆ.
ದೊಡ್ಡ ಗ್ರಾಪಂ ಆಗಿದ್ದು, ಇಲ್ಲಿ ಸರಿಸುಮಾರು 25,000 ಜನಸಂಖ್ಯೆ ಇದೆ. ಇಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಎಷ್ಟೇ ದಂಡ ವಿಧಿಸಿದರೂ ಜನ ಸೇರುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಪ್ರತಿದಿನ ಕೊರೋನ ಸೋಂಕಿತರ ಮನೆಗಳನ್ನು ಸೀಲ್ಡೌನ್ ಮಾಡಲಾಗು ತ್ತಿದ್ದು, ಈವರೆಗೆ 25ಕ್ಕೂ ಅಧಿಕ ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಇವರಿಗೆ ಪಡಿತರ ವಿತರಿಸಲು ಕೊರೋನ ವಾರಿಯರ್ಸ್ ತಂಡ ಹಾಗೂ ಟಾಸ್ಕ್ ಫೋರ್ಸ್ ತಂಡ ಸಹಾಯ ಮಾಡುತ್ತಿದೆ ಎಂದು ಪಿಡಿಓ ಮಂಜುನಾಥ್ ಶೆಟ್ಟಿ ತಿಳಿಸಿದ್ದಾರೆ.
ಅಂಗಡಿ ಮುಗ್ಗಟ್ಟುಗಳ ವಿರುದ್ಧ ಕ್ರಮ
ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಅಂಗಡಿಗಳಲ್ಲಿ ಜನಸಂದಣಿ ಹೆಚ್ಚಿ ರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿದ ಪಿಡಿಓ ನೇತೃತ್ವದ ತಂಡ ನಿಯಮ ಉಲ್ಲಂಘಿಸಿದ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿ, ದಂಡ ವಸೂಲಿ ಮಾಡಿದೆ.
ಬೆಳಗ್ಗೆ 10ಗಂಟೆಯ ನಂತರ ವ್ಯಾಪಾರ ನಡೆಸಿದ ಅಂಗಡಿಗಳಿಗೆ ದಂಡ ವಿಧಿಸ ಲಾಗಿದೆ ಮತ್ತು ಕೆಲವು ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ಅದೇ ರೀತಿ ಅಗತ್ಯ ವಸ್ತುಗಳ ಮಾರಾಟ ಮಾಡುವ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡಿದ ಅಂಗಡಿ ಗಳಿಂದ ದಂಡ ವಸೂಲಿ ಮಾಡಲಾಗಿದೆ. ಮುಂದೆ ಕೂಡ ನಿಯಮ ಪಾಲನೆ ಮಾಡದ ವರ್ತಕರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಪಿಡಿಓ ಎಚ್ಚರಿಕೆ ನೀಡಿದ್ದಾರೆ.