ರಾಜ್ಯ ಸರಕಾರದ ವಿದ್ಯುತ್ ದರ ಏರಿಕೆ ಕ್ರಮ ಖಂಡನೀಯ: ವೆಲ್ಫೇರ್ ಪಾರ್ಟಿ
ಮಂಗಳೂರು, ಜೂ. 10: ರಾಜ್ಯದಲ್ಲಿ ಇನ್ನೂ ಲಾಕ್ಡೌನ್ ಜಾರಿಯಲ್ಲಿರುವಾಗಲೇ, ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಪ್ರಕಟಿಸಿರುವುದು ಬಹಳ ವಿಷಾದನೀಯ ವಿಚಾರ ಎಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ವಿದ್ಯುತ್ ದರ ಏರಿಕೆ ಕ್ರಮವನ್ನು ಖಂಡಿಸಿದೆ.
ಕೊರೋನ ಲಾಕ್ಡೌನ್ ನಿಂದಾಗಿ ಜನರು ಕೆಲಸಗಳಿಲ್ಲದೆ, ವೇತನವಿಲ್ಲದೆ, ವ್ಯಾಪಾರಸ್ಥರಿಗೆ ಕೂಡಾ ತಮ್ಮ ವಹಿವಾಟುಗಳಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ರಾಜ್ಯ ಸರಕಾರ ಜನತೆಯ ಮೇಲೆ ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 30 ಪೈಸೆಯನ್ನು ಹೆಚ್ಚಿಸಿರುವುದು ಖಂಡನೀಯ. ಕಳೆದ ಒಂದು ವರ್ಷದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮೂರನೇ ಬಾರಿಗೆ ವಿದ್ಯುತ್ ಶುಲ್ಕವನ್ನು ಏರಿಕೆ ಮಾಡುತ್ತಿದೆ. ಈಗಾಗಲೇ ಉಂಟಾದ ಆರ್ಥಿಕ ಸಂಕಷ್ಟದ ನಡುವೆ ಪೆಟ್ರೋಲ್ -ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಇದು ಸಹಿಸಲಸಾಧ್ಯವಾದ ಹೊರೆಯಾಗಿದ್ದು ಸರ್ಕಾರವು ತನ್ನ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಇದರ ದ. ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆಯಾಗಿರುವ ಮರ್ಯಂ ಶಹೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.