ಪೆರ್ನೆ : ಕೊರೋನ ಸೋಂಕಿತ ಕುಟುಂಬ, ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ
ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸಹಕಾರಿ ಸಂಘದ ವತಿಯಿಂದ ಪೆರ್ನೆ ಮತ್ತು ಬಿಳಿಯೂರು ಗ್ರಾಮ ವ್ಯಾಪ್ತಿಯಲ್ಲಿರುವ ಕೊರೋನ ಸೋಂಕಿತ ಮನೆಯವರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಯಿತು.
ಸಹಕಾರಿ ಸಂಘದ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ ಕಿಟ್ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜನತೆ ದುಡಿಮೆ ಇಲ್ಲದೆ ಬಹಳ ಸಂಕಷ್ಟದಲ್ಲಿ ಇದ್ದಾರೆ ಅದರಲ್ಲೂ ಕೊರೋನ ಸೋಂಕಿತ ಮನೆಯವರ ಕಷ್ಟ ಹೇಳ ತೀರದಂತಾಗಿದೆ ಹಾಗೂ ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣದ ಹಂಗು ತೊರೆದು ಕನಿಷ್ಠ ವೇತನದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರೂ ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಂತಹವರನ್ನು ಗುರುತಿಸಿ ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು ನಾವುಗಳು ಕೊರೋನ ಮಹಾಮಾರಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕೋವಿಡ್-19 ಮುಂಜಾಗ್ರತಾ ಕ್ರಮದೊಂದಿಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ತನಿಯಪ್ಪ ಪೂಜಾರಿ, ನಿರ್ದೇಶಕರಾದ ಡಾ. ರಾಜಗೋಪಾಲ ಶರ್ಮ, ಸುನಿಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ನೀಲಪ್ಪ ಗೌಡ, ಚೆನ್ನಕೇಶವ, ಬಶೀರ್, ಜಯಲಕ್ಷ್ಮಿ, ಬೇಬಿ, ರೇವತಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಘದ ವ್ಯಾಪ್ತಿಯಲ್ಲಿರುವ ಒಟ್ಟು 38 ಮಂದಿಗೆ 25 ಕೆ.ಜಿ. ಅಕ್ಕಿ ಸೇರಿದಂತೆ 1500 ಮೌಲ್ಯದ ಕಿಟ್ ವಿತರಿಸಲಾಯಿತು. ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ. ಸ್ವಾಗತಿಸಿ, ವಂದಿಸಿದರು.