ಮುಡಿಪು : ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ
ಕೊಣಾಜೆ: ಕೆಲವರ ಹಿತದೃಷ್ಟಿಗಾಗಿ ಸರ್ಕಾರ ನಡೆಸುವ ಬಿಜೆಪಿಯು ಬಡವರ ಮೇಲೆ ಅನ್ಯಾಯ ಮಾಡುತ್ತಿದೆ. ಜನಸಾಮಾನ್ಯರ ಕಷ್ಟವನ್ನು ಅರಿಯದ ಸರ್ಕಾರ, ಇಂತಹ ಸರ್ಕಾರವನ್ನು ತೊಲಗಿಸಲು ನಾವೆಲ್ಲರ ಪಣತೊಡಬೇಕು ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಹೇಳಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಸಿದ ಕೇಂದ್ರ ಸರ್ಕಾರ ಮತ್ತು ವಿದ್ಯುತ್ ದರ ಏರಿಸಿದ ರಾಜ್ಯ ಸರ್ಕಾರದ ವಿರುದ್ಧ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಮುಡಿಪು ಜಂಕ್ಷನ್ ನಲ್ಲಿರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದ 'ಪೆಟ್ರೋಲ್ ನಾಟ್ ಔಟ್ 100' ಪ್ರತಿಭಟನೆಯಲ್ಲಿ ಮಾತನಾಡಿದರು.
ಮೀನು, ಮಾಂಸ ದರ ಏರಿಕೆಯನ್ನು ಮುಂದಿಟ್ಟುಕೊಂಡು ಪೆಟ್ರೋಲ್ ದರ ಏರಿಕೆಯನ್ನು ಸಮರ್ಥಿಸುವ ಅಂಧ ಭಕ್ತರಿಗೆ ಜನರ ಸಮಸ್ಯೆ ಗೊತ್ತಿಲ್ಲ, ಇಂತಹವರಿಂದ ದೇಶ ಉದ್ಧಾರ ಆಗದು. ಲಾಕ್ ಡೌನ್ ಸಂದರ್ಭದಲ್ಲೂ ಅಗತ್ಯ ವಸ್ತುಗಳಿಗೆ ದುಬಾರಿ ದರ ವಿಧಿಸಲಾಗುತ್ತಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ಸದಸ್ಯ ಹೈದರ್ ಕೈರಂಗಳ, ಪಜೀರ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾದ ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ಸೀತಾರಾಂ ಶೆಟ್ಟಿ, ಇಮ್ತಿಯಾಝ್ ಪಜೀರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ಗಟ್ಟಿ, ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು, ಕಿಸಾನ್ ಘಟಕದ ಅಧ್ಯಕ್ಷ ಅರುಣ್ ಡಿಸೋಜ, ಪ್ರಮುಖರಾದ ಶರೀಫ್ ಚೆಂಬೆತೋಟ, ಗಣೇಶ್ ನಾಯ್ಕ್, ಮುರಳೀಧರ ಶೆಟ್ಟಿ ಮೋರ್ಲ, ಸಮೀರ್ ಪಜೀರ್, ಪದ್ಮನಾಭ ನರಿಂಗಾನ, ಹನೀಫ್ ಚಂದಹಿತ್ಲು, ರಹ್ಮಾನ್, ಬಾದುಶಾ ಸಾಂಬಾರತೋಟ ಇನ್ನಿತರರು ಉಪಸ್ಥಿತರಿದ್ದರು.