ಕೋವಿಡ್ ಸಂಕಷ್ಟ ಕಾಲದಲ್ಲಿ ನೆರವಾದ ಉದ್ಯೋಗ ಖಾತರಿ ಯೋಜನೆ: ಉಡುಪಿ ಜಿಲ್ಲೆಯಲ್ಲಿ 9.55 ಕೋಟಿ ರೂ. ಕೂಲಿ ಪಾವತಿ
ಉಡುಪಿ, ಜೂ.16: ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಸರಕಾರ ವಿಧಿಸಿದ ಹಲವು ನಿರ್ಬಂಧಗಳಿಂದ, ಬದುಕಿಗಾಗಿ ದೈನಂದಿನ ಸಂಪಾದನೆಯನ್ನೇ ನಂಬಿಕೊಂಡಿದ್ದ ಅಸಂಖ್ಯಾತ ಕೂಲಿ ಕಾರ್ಮಿಕರಿಗೆ ಜೀವನ ನಿರ್ವಹಣೆಯೇ ಕಷ್ಟವಾಗತೊಡಗಿತ್ತು. ಆದರೆ, ಈ ಸಮಯದಲ್ಲಿ ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲೆಯ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಒದಗಿಸುವ ಮೂಲಕ ಅವರೆಲ್ಲರ ಹಾಗೂ ಅವರ ಕುಟುಂಬದ ಮೊಗದಲ್ಲಿ ನಗುವನ್ನು ಮೂಡಿಸಿದೆ.
ಜಿಲ್ಲೆಯಲ್ಲಿ ಕೊರೋನ ಕಾರಣದಿಂದ ಸಾಕಷ್ಟು ಬಡ ಕೂಲಿ ಕಾರ್ಮಿಕರು, ಕಾರ್ಖಾನೆಗಳಲ್ಲಿ, ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರು, ಉದ್ಯೋಗಿಗಳು ಸಾಕಷ್ಟು ಮಂದಿ ಕೆಲಸ ಕೊಂಡಿದ್ದು, ಇನ್ನಷ್ಟು ಮಂದಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದರು. ಹೆಚ್ಚಿನ ಯುವಕರು ಮನೆಯಲ್ಲೇ ಇದ್ದು ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಗ್ರಾಮೀಣ ಭಾಗದ ಜನರಿಗೆ ಹಾಗೂ ಊರು ಸೇರಿರುವ ನಗರವಾಸಿಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಉದ್ಯೋಗದ ಭಾಗ್ಯ ಕರುಣಿಸಿದೆ.
ಕೊರೋನ ಲಾಕ್ಡೌನ್ ಸಂದರ್ಭದಲ್ಲಿ ತೊಂದರೆಗೊಳಗಾದ ಜಿಲ್ಲೆಯ ಕೂಲಿ ಕಾರ್ಮಿಕರ ಒಟ್ಟು 10,632 ಕುಟುಂಬಗಳ 18,503 ಮಂದಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗವನ್ನು ಒದಗಿಸಲಾಗಿದೆ. ಇವರ ಮೂಲಕ 3046 ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಒಟ್ಟು 955.36 ಲಕ್ಷ ರೂ.ಗಳನ್ನು ಕೂಲಿಗೆ ಹಾಗೂ 203.04 ಲಕ್ಷ ರೂ.ಗಳನ್ನು ಸಾಮಗ್ರಿ ಖರೀದಿದೆ ವೆಚ್ಚ ಮಾಡಲಾಗಿದೆ.
3,046 ಕಾಮಗಾರಿ ಅನುಷ್ಠಾನ: ಜಿಲ್ಲೆಯಲ್ಲಿ 103 ಕೆರೆ ಹೂಳೆತ್ತುವ ಕಾಮಗಾರಿ, 152 ತೋಡು ಹೂಳೆತ್ತುವ ಕಾಮಗಾರಿ, 982 ನೀರಾವರಿ ಬಾವಿ, 855 ಬಚ್ಚಲು ಗುಂಡಿ, 326 ದನದ ಕೊಟ್ಟಿಗೆ, 44 ಅಡಿಕೆ,ತೆಂಗು,ಮಲ್ಲಿಗೆ ಮುಂತಾದ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಹೊಸದಾಗಿ 3,213 ಕುಟುಂಬಗಳಿಗೆ ಹೊಸದಾಗಿ ಉದ್ಯೋಗ ಚೀಟಿಯನ್ನು ವಿತರಿಸಲಾಗಿದೆ.
ಸ್ವಂತ ಉದ್ಯೋಗ, ಸ್ವಾವಲಂಬಿ ಬದುಕು ನಡೆಸಲು ಆಸಕ್ತಿ ಇರುವ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ವೈಯುಕ್ತಿಕ ಕಾಮಗಾರಿಗಳನ್ನು ಕೈಗೊಂಡು ಸ್ವಂತ ಬದುಕು ಕಟ್ಟಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಹೈನುಗಾರಿಕೆಯಲ್ಲಿ ಆಸಕ್ತಿ ಇರುವವರು ದನದ ಹಟ್ಟಿ, ಕೋಳಿ, ಹಂದಿ, ಆಡು, ಕುರಿ ಶೆಡ್ಡುಗಳನ್ನು ನಿರ್ಮಾಣ ಮಾಡಿಕೊಳ್ಳಲು ನರೇಗಾ ಯೋಜನೆಯಡಿ ಅವಕಾಶವಿರುತ್ತದೆ.
ಕೃಷಿಯಲ್ಲೂ ಅವಕಾಶ: ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಅಡಿಕೆ, ತೆಂಗು, ಗೇರು, ಕೋಕೋ, ಕರಿಮೆಣಸು, ಮಲ್ಲಿಗೆ, ಪ್ಟೌಷ್ಠಿಕ ತೋಟ ನಿರ್ಮಾಣ ಮುಂತಾದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಅಡಿಕೆ, ತೆಂಗು ಪುನಶ್ಚೇತನ ಕಾಮಗಾರಿ ಕೈಗೊಳ್ಳಲು ಸಹ ಅವಕಾಶವಿರುತ್ತದೆ. ಕೃಷಿ ಪೂರಕವಾಗಿ ಎರೆಹುಳು ತೊಟ್ಟಿ, ನೀರಾವರಿ ಬಾವಿ, ಕೃಷಿ ಹೊಂಡ ಕಾಮಗಾರಿಗಳಿಗೂ ಅವಕಾಶವಿದ್ದು, ರೈತರು ತಮ್ಮ ಜಮೀನಿನಲ್ಲಿ ಮಹಾಗನಿ, ಸಾಗುವಾನಿ, ಹಲಸು, ನೇರಳೆ, ಮಾವು, ಅತ್ತಿ, ನುಗ್ಗೆ ಮುಂತಾದ ಅರಣ್ಯ ಗಿಡಗಳನ್ನು ಬೆಳೆಸಲು ಅವಕಾಶ ನೀಡಲಾಗಿದೆ. ಮನೆಯಲ್ಲಿ ಸ್ನಾನ ಮಾಡಿದ ನೀರು, ಪಾತ್ರೆ, ಬಟ್ಟೆ ತೊಳೆದ ನೀರನ್ನು ಬಿಡಲು ಬಚ್ಚಲು ಗುಂಡಿಯನ್ನು ನಿರ್ಮಿಸಲು ಯೋಜನೆಯಡಿ ಅವಕಾಶವಿದೆ. ನೀರು ಸಂರಕ್ಷಣೆಯನ್ನು ಕೈಗೊಳ್ಳಲು ರೈತರು ತಮ್ಮ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕಗಳನ್ನು ನಿರ್ಮಿಸಿಕೊಳ್ಳಲು ಕೂಡಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಗುರಿ ಮೀರಿದ ಸಾಧನೆ: ಮಹಾತ್ಮಗಾಂಧಿ ನರೇಗಾ ಯೋಜನೆಯ 2021-22ನೇ ಸಾಲಿನ ಅನುಷ್ಟಾನ ದಲ್ಲಿ ಉಡುಪಿ ಜಿಲ್ಲೆ ಗುರಿ ಮೀರಿದ ಪ್ರಗತಿಯನ್ನು ಸಾಧಿಸಿದೆ. ಈ ಆರ್ಥಿಕ ಸಾಲಿನಲ್ಲಿ ಒಟ್ಟು 6.70 ಲಕ್ಷ ಮಾನವ ದಿನಗಳ ಗುರಿ ಇದ್ದು, ಜೂನ್ ಅಂತ್ಯಕ್ಕೆ 2.96 ಲಕ್ಷ ಮಾನವ ದಿನಗಳ ಸೃಜನೆಯ ಗುರಿಗೆ ಈಗಾಗಲೇ ಮೀರಿದ್ದು, ಈವರೆಗೆ 3.26 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.107.95 ಸಾಧನೆ ಮಾಡುವ ಮೂಲಕ ಗುರಿ ಮೀರಿದ ಸಾಧನೆಯತ್ತ ದಾಪುಗಾಲು ಇರಿಸಿದೆ. ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಶೇ.63.20ರಷ್ಟಿದ್ದು, ಇದು ರಾಜ್ಯದಲ್ಲೇ ಗರಿಷ್ಟ ಪ್ರಮಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ನ ಯುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ.
ನರೇಗಾ ಯೋಜನೆಯಲ್ಲಿ ತಾಲೂಕುವಾರು ಸಾಧನೆಗಳ ವಿವರ ಹೀಗಿದೆ.
ಬ್ರಹ್ಮಾವರ: ಜೂನ್ ಅಂತ್ಯಕ್ಕೆ 51,481 ಮಾನವ ದಿನಗಳ ಸೃಜನೆಯ ಗುರಿ ಇದ್ದು, 65,853 ಮಾನವ ದಿನಗಳನ್ನು ಈಗಾಗಲೇ ಸೃಜಿಸಿ ಶೇ.127.92 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 198.35 ಲಕ್ಷ ರೂ. ಕೂಲಿ ವೆಚ್ಚ ಹಾಗೂ 11.46 ಲಕ್ಷ ರೂ.ಸಾಮಗ್ರಿ ವೆಚ್ಚ ಮಾಡಲಾಗಿದೆ.
ಬೈಂದೂರು: ಜೂನ್ ಅಂತ್ಯಕ್ಕೆ 31,751 ಮಾನವ ದಿನಗಳ ಸೃಜನೆಯ ಗುರಿ ಇದ್ದು, 34,190 ಮಾನವ ದಿನಗಳನ್ನು ಸೃಜಿಸಿ ಶೇ.107.68 ಸಾಧನೆ ಮಾಡಲಾ ಗಿದೆ. ಲಾಕ್ಡೌನ್ ಅವಧಿಯಲ್ಲಿ 102.11 ಲಕ್ಷ ರೂ. ಕೂಲಿ ವೆಚ್ಚ ಹಾಗೂ 19.36 ಲಕ್ಷ ರೂ. ಸಾಮಗ್ರಿ ವೆಚ್ಚ ಮಾಡಲಾಗಿದೆ.
ಹೆಬ್ರಿ: ಜೂನ್ ಅಂತ್ಯಕ್ಕೆ 15,997 ಮಾನವ ದಿನಗಳ ಸೃಜನೆಯ ಗುರಿ ಇದ್ದು ಈವರೆಗೆ 14,584 ಮಾನವ ದಿನಗಳನ್ನು ಸೃಜಿಸಿ ಶೇ.91.17 ಸಾಧನೆ ಮಾಡ ಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 44.84 ಲಕ್ಷ ಕೂಲಿ ವೆಚ್ಚ ಹಾಗೂ 15.51 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕಾಪು: ಜೂನ್ ಅಂತ್ಯಕ್ಕೆ 19,709 ಮಾನವ ದಿನಗಳ ಸೃಜನೆಯ ಗುರಿ ಇದ್ದು 30,849 ಮಾನವ ದಿನಗಳನ್ನು ಇದುವರೆಗೆ ಸೃಜಿಸಿ ಶೇ.156.52 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 92.88 ಲಕ್ಷ ಕೂಲಿ ವೆಚ್ಚ ಹಾಗೂ 24.07 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕಾರ್ಕಳ: ಜೂನ್ ಅಂತ್ಯಕ್ಕೆ 40,213 ಮಾನವ ದಿನಗಳ ಸೃಜನೆಯ ಗುರಿ ಇದ್ದು, ಇದುವರೆಗೆ 30,724 ಮಾನವ ದಿನಗಳನ್ನು ಸೃಜಿಸಿ ಶೇ. 76.40 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 90.15 ಲಕ್ಷ ಕೂಲಿ ವೆಚ್ಚ ಹಾಗೂ 42.91 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಕುಂದಾಪುರ: ಜೂನ್ ಅಂತ್ಯಕ್ಕೆ ಒಟ್ಟು 1,15,424 ಮಾನವ ದಿನಗಳ ಸೃಜನೆ ಗುರಿ ಇದ್ದು,ಈವರೆಗೆ 1,23,811 ಮಾನವ ದಿನಗಳನ್ನು ಸೃಜಿಸಿ ಶೇ.107.27 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 369.13 ಲಕ್ಷ ಕೂಲಿ ವೆಚ್ಚ ಹಾಗೂ 74.89 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಉಡುಪಿ: ಜೂನ್ ಅಂತ್ಯಕ್ಕೆ 21,498 ಮಾನವ ದಿನಗಳ ಸೃಜನೆಯ ಗುರಿ ಇದ್ದು, 19,613 ಮಾನವ ದಿನಗಳನ್ನು ಸೃಜಿಸಿ ಶೇ.91.23 ಸಾಧನೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ 57.89 ಲಕ್ಷ ಕೂಲಿ ವೆಚ್ಚ ಹಾಗೂ 19.58 ಲಕ್ಷ ಸಾಮಗ್ರಿ ವೆಚ್ಚ ಮಾಡಲಾಗಿದೆ.
ಜಿಲ್ಲೆಯ ಗ್ರಾಮೀಣ ಭಾಗದ ಜನರು, ಕೂಲಿ ಕಾರ್ಮಿಕರು, ರೈತರು ಗರಿಷ್ಠ ಪ್ರಮಾಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಲಾಭವನ್ನು ಪಡೆದು ಕೊಳ್ಳಲು ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಪಂ. ತಾಪಂ ಅಥವಾ ಅನುಷ್ಠಾನ ಇಲಾಖೆ ಕಚೇರಿಗಳನ್ನು ಸಂರ್ಪಕಿಸಬಹುದು. ಅಥವಾ ಉಡುಪಿ ಜಿಲ್ಲಾ ಪಂಚಾಯತ್ ಕಛೇರಿಯ ದೂರವಾಣಿ ಸಂಖ್ಯೆ: 0820-2574945ನ್ನು ಕಚೇರಿ ವೇಳೆಯಲ್ಲಿ ಸಂರ್ಪಕಿಸಬಹುದು.