ಭಟ್ಕಳ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶ ವೀಕ್ಷಿಸಿದ ಕೇಂದ್ರ ತಂಡ
ಭಟ್ಕಳ: ಇತ್ತೀಚೆಗೆ ಸಂಭವಿಸಿದ ತೌಕ್ತೆ ಚಂಡಮಾರುತದಿಂದಾಗಿ ಉ.ಕ. ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಮೌಲ್ಯಮಾಪನ ಮಾಡಲು ಕೇಂದ್ರದ ಇಂಟರ್ ಮಿನಿಸ್ಟೇರಿಯಲ್ ತಂಡ ಗುರುವಾರ ಭಟ್ಕಳದ ತಲಗೋಡು, ಜಾಲಿಕೋಡಿ ಹಾಗೂ ತೆಂಗಿನಗುಂಡಿ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ತಂಡದ ಕೇಂದ್ರ ಗೃಹಸಚಿವಾಲಯದ ಅಧಿಕಾರಿ ಸುಶೀಲ್ ಪಾಲ್ ತೌಕ್ತೆ ಚಂಡಮಾರುತ ಹಾನಿಯನ್ನು ಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಕೇಂದ್ರದ ತಂಡ ಇಂದು ಭಟ್ಕಳ ತಾಲೂಕಿಗೆ ಭೇಟಿ ನೀಡಿದೆ. ಹಾನಿಯ ಬಗ್ಗೆ ಮಾಹಿತಿಯನ್ನು ಕ್ರೂಢೀಕರಿಸಿ ಪರಿಹಾರ ಕುರಿತಂತೆ ವರದಿ ನೀಡಲಿದ್ದು ಇದರ ಆಧಾರದಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.
ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯ ಕುರಿತಂತೆ ಪರಿಶೀಲನೆ ನಡೆಸಲು ಕೇಂದ್ರ ತಂಡ ಆಗಮಿಸಿದ್ದು, ಜಿಲ್ಲೆಯ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
Next Story