ಜೂ.21ರಿಂದ ಸಾರಥಿ -4 ಸೇವೆಗಳು ಆರಂಭ: ಉಡುಪಿ ಆರ್ಟಿಓ
ಉಡುಪಿ, ಜೂ.19: ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಆದೇಶದಂತೆ ಸಾರ್ವಜನಿಕ ಸೇವೆ ಹಾಗೂ ರಾಜಸ್ವ ಸಂಗ್ರಹಣೆ ಹಿತದೃಷ್ಟಿಯಿಂದ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರಥಿ -4ಗೆ ಸಂಬಂಧಿಸಿದ (ಚಾಲನಾ ಲೈಸನ್ಸ್, ಕಲಿಕಾ ಲೈಸನ್ಸ್, ಚಾಲನಾ ಲೈಸನ್ಸ್ ನವೀಕರಣ) ಸೇವೆಗಳನ್ನು ಕೋವಿಡ್-19 ಮಾರ್ಗಸೂಚಿಗಳನ್ನು ಪಾಲನೆಯೊಂದಿಗೆ ಜೂ.21ರಿಂದ ಆರಂಭಿಸಲಾಗುವುದು ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.
ಈಗಾಗಲೇ ಎಲ್ಲಾ ರೀತಿಯ ಪರೀಕ್ಷೆಗಳಿಗೆ ದಿನಗಳನ್ನು ಖಾತ್ರಿಪಡಿಸಿರುವವರಿಗೆ ಮಾತ್ರ ಮುಂದಿನ ವಾರದಲ್ಲಿ ಪರೀಕ್ಷೆಗೆ ಬರಬಹುದಾಗಿದೆ. ಹೊಸದಾಗಿ ಶುಲ್ಕ ಪಾವತಿಸುವವರಿಗೆ ಜುಲೈ ತಿಂಗಳಿನಿಂದ ಪರೀಕ್ಷೆಗೆ/ಕಚೇರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಕೋವಿಡ್ 19ರ ನಿಯಮದಂತೆ ಶೇ.50 ಅಭ್ಯರ್ಥಿಗಳು ಮಾತ್ರ ಕಚೇರಿಗೆ ಆದ್ಯತೆ ಮೇರೆಗೆ ಮುಂಗಡ ನೇಮಕಾತಿ ಪಡೆದು ಕಚೇರಿಗೆ ಬರಬಹುದಾಗಿದೆ. ಈ ಸಂಬಂಧ ಇತರೆ ಸೂಕ್ತ ಮಾಹಿತಿ ಗಳನ್ನು ಪರಿವಾಹನ ಸಾರಥಿ-4 ತಂತ್ರಾಂಶದಡಿಯಲ್ಲಿ ಇ-ಪೋರ್ಟ್ನಲ್ಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜೂ.11ರಿಂದ ಜೂ.18ರವರೆವಿಗೆ ಸುಮಾರು 545 ಖಾಸಗಿ ಭಾರಿ ಪ್ರಯಾಣಿಕ ವಾಹನ ಚಾಲಕರು ಹಾಗೂ ನಿರ್ವಾಹಕ ಸಿಬ್ಬಂದಿ ಕೋವಿಡ್ 19 ಉಚಿತ ಲಸಿಕೆ ಪಡೆದು ಕೊಂಡಿದ್ದಾರೆ. ಇವರು ಬಸ್ ಚಾಲನಾ ಕರ್ತವ್ಯಕ್ಕೆ ರೋಗನಿರೋಧಕ ಶಕ್ತಿಯೊಂದಿಗೆ ಸಾರ್ವಜನಿಕ ಸೇವೆಗೆ ಅರ್ಹತೆ ಯನ್ನು ಪಡೆದಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.