ಮೃತ್ಯುಂಜಯ ಹೊಳೆಯಲ್ಲಿ ತ್ಯಾಜ್ಯ ರಾಶಿ !
ಮಂಗಳೂರು, ಜೂ. 19: ನೇತ್ರಾವತಿ ನದಿಯ ಉಪ ನದಿ ಮೃತ್ಯುಂಜಯ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರಿ ಜತೆ ತ್ಯಾಜ್ಯವು ಉಜಿರೆಯ ನಿಡಗಲ್ ಅಣೆಕಟ್ಟು ಬಳಿ ಸಂಗ್ರಹವಾಗಿದ್ದು, ಪ್ರಕೃತಿ ಮೇಲಿನ ಮಾನವ ದೌರ್ಜನ್ಯಕ್ಕೆ ಸಾಕ್ಷಿ ಎಂಬಂತಿದೆ.
ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿಯೂ ಮೃತ್ಯುಂಜಯ ಹೊಳೆಯಲ್ಲಿ ಭೂಕುಸಿತ, ಜಲಪ್ರವಾಹ ಸಂಭವಿಸಿ ಸಾಕಷ್ಟು ಪ್ರಮಾಣದ ಹಾನಿ ಉಂಟಾಗಿದೆ. ಈ ಹೊಳೆ ಅಣೆಕಟ್ಟಿನಿಂದ ನೀರು ನೇತ್ರಾವತಿ ನದಿಗೂ ಅಲ್ಲಿಂದ ತುಂಬೆ ಅಣೆಕಟ್ಟಿನ ಮೂಲಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಾಗಿಯೂ ಸರಬರಾಜಾಗುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ನದಿ, ಹೊಳೆಗಳ ಒಡಲಲ್ಲಿ ತ್ಯಾಜ್ಯವು ನೀರನ್ನು ಕಲುಷಿತಗೊಳಿಸುವುದಲ್ಲದೆ ಪ್ರಕೃತಿಯ ಮೇಲೆಯೂ ಭಾರೀ ಹೊಡೆತವನ್ನು ನೀಡುತ್ತದೆ ಎಂಬುದು ಪರಿಸರವಾದಿಗಳ ಆತಂಕ.
ಒಂದೆಡೆ ಅಭಿವೃದ್ಧಿ ಹೆಸರಿನಲ್ಲಿ ನದಿಗಳಿಗೆ ಅಣೆಕಟ್ಟು ಕಟ್ಟಿ ಹೊಳೆಗಳನ್ನು ಬಂಧಿಸುವ ಕೆಲಸವಾದರೆ, ಇನ್ನೊಂದೆಡೆ ಮನೆಯ ಹೊಲಸು ಹಾಗೂ ತ್ಯಾಜ್ಯಗಳನು ನದಿಗೆ ಎಸೆಯುವ ಮೂಲಕ ಮಾಲಿನ್ಯಗೊಳಿಸಲಾ ಗುತ್ತದೆ. ದೇವಸ್ಥಾನದ ತೀರ್ಥವಾಗುವ ನದಿ, ಹೊಳೆಗಳ ನೀರನ್ನು ಈ ರೀತಿ ಕಲುಷಿತಗೊಳಿಸುವುದು ಯಾವ ನ್ಯಾಯ ಎಂದು ಸಹ್ಯಾದ್ರಿ ಸಂಚಯದ ಸಂಚಾಲಕ ಹಾಗೂ ಚಾರಣಿಗ ದಿನೇಶ್ ಹೊಳ್ಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.