ದ.ಕ. ಜಿಲ್ಲೆಯಲ್ಲಿ ರವಿವಾರ ಹಳದಿ ಅಲರ್ಟ್ : ಹವಾಮಾನ ಇಲಾಖೆ
ಮಂಗಳೂರು, ಜೂ.19: ದ.ಕ ಜಿಲ್ಲೆಯಾದ್ಯಂತ ಶನಿವಾರ ಸಾಧಾರಣ ಮಳೆಯಾಗಿದೆ. ಹವಾಮಾನ ಮುನ್ಸೂಚನೆಯಂತೆ ಶನಿವಾರ ಆರೆಂಜ್ ಅಲರ್ಟ್ ನೀಡಲಾಗಿತ್ತು. ಅಲ್ಲದೆ ಭಾರೀ ಮಳೆಯನ್ನು ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆಯಂತೆ ಉತ್ತಮ ಮಳೆಯಾಗಿಲ್ಲ. ಆದಾಗ್ಯೂ ಆಗಾಗ ಕೆಲಕಾಲ ಮಳೆ ತನ್ನ ಅಬ್ಬರ ತೋರಿಸಿದೆ.
ನಗರದಲ್ಲಿ ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಕೆಲಹೊತ್ತು ಗಾಳಿ ಸಹಿತ ಮಳೆ ಸುರಿದಿದೆ. ಆ ಬಳಿಕ ಮೋಡ ಕವಿದ ವಾತಾವರಣದದೊಂದಿಗೆ ಕೆಲವು ಹೊತ್ತು ಉತ್ತಮ ಮಳೆಯಾಯಿತು.
ಜಿಲ್ಲಾದ್ಯಂತ ಈ ಬಾರಿ ಗಾಳಿಯ ಆರ್ಭಟ ಹೆಚ್ಚಿದ್ಚು ಅನೇಕ ಮರಗಳು ಧರಾಶಾಯಿಯಾಗಿದೆ. ಪಡುಶೆಡ್ಡೆ ಗ್ರಾಮದ ಹಾಲಾಡಿಗುಡ್ಡೆಯ ನಿವಾಸಿ ವೆಂಕಟೇಶ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿರುತ್ತದೆ. ಅಲ್ಲದೆ ಬಂಟ್ವಾಳ ತಾಲೂಕಿನಲ್ಲಿ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ರವಿವಾರ ಹಳದಿ ಅಲರ್ಟ್
ರವಿವಾರವೂ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿರುವ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದೆ. ಮುಂದಿನ 48 ಗಂಟೆಗಳಲ್ಲಿ 40-50 ಕಿಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಅರಬ್ಬಿ ಸಮುದ್ರದಲ್ಲಿ 4-5 ಮೀ. ಎತ್ತರದ ಅಲೆಗಳು ಇರಲಿವೆ ಎಂದು ತಿಳಿಸಿದೆ.