ನಿವೃತ್ತ ಉಡುಪಿ ಸಂಸ್ಕೃತ ಶಾಲೆಯ ಪ್ರಾರ್ಚಾಯರಿಗೆ ಸನ್ಮಾನ
ಉಡುಪಿ, ಜು.25: ನಿವೃತ್ತಿ ಹೊಂದುತ್ತಿರುವ ಉಡುಪಿ ಸಂಸ್ಕೃತ ಮಹಾಪಾಠ ಶಾಲೆಯ ಪ್ರಾಚಾರ್ಯ ಎನ್.ಲಕ್ಷ್ಮೀನಾರಾಯಣ ಭಟ್ ಅವರ ಸನ್ಮಾನ ಕಾರ್ಯಕ್ರಮವು ರವಿವಾರ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದ ನರಹರಿ ತೀರ್ಥ ವೇದಿಕೆಯಲ್ಲಿ ನಡೆಯಿತು.
ಸನ್ಮಾನಿಸಿ ಮಾತನಾಡಿದ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಸುಧೀರ್ಘ ಕಾಲದ ಪಾಠಾನುಭವದ ಭಟ್ಟರು ನಮ್ಮ ಆಸ್ತಿ. ಅವರ ಅಸದೃಶ ಪಾಂಡಿತ್ಯ ಇನ್ನಷ್ಟು ಜನಮಾನಸವನ್ನು ಬೆಳಗುವಂತಾಗಬೇಕು. ನಿವೃತ್ತಿ ಎಂಬುದು ಸರಕಾರದ ವತಿಯಿಂದಲೇ ಹೊರತು ಸರ್ವ ರೀತಿಯಿಂದಲ್ಲ ಎಂದು ಹೇಳಿದರು.
ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಹರಿನಾರಾಯಣ ದಾಸ ಅಸ್ರಣ್ಣ ಮಾತನಾಡಿ, ಸಂಸ್ಕೃತಕ್ಕಾಗಿ ಸಂಸ್ಕೃತ ಕಾಲೇಜಿಗಾಗಿ ತನ್ನನ್ನೇ ಅರ್ಪಿಸಿಕೊಂಡ ಮಹನೀಯರು, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ತಿದ್ದುವ ಚಾಣಾಕ್ಷತನ, ಸಂಘ ಟನಾ ಕಲೆ, ಅದ್ಭುತವಾದ ವಿದ್ವತ್ತು ವಿದ್ಯಾರ್ಥಿಗಳಲ್ಲಿ ಕೆಲಸ ಮಾಡಿಸುತ್ತದೆ ಎಂದರು.
ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.ಆಗಮನ ಪಂಡಿತ ಪಂಜ ಭಾಸ್ಕರ ಭಟ್, ಎಸ್.ಎಂ.ಎಸ್.ಪಿ. ಸಭೆಯ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ ಮಾತನಾಡಿದರು. ಸನ್ಮಾನವನ್ನು ಸ್ವೀಕರಿಸಿದ ಲಕ್ಶ್ಮೀನಾರಾಯಣ ಭಟ್ ಕೃತಜ್ಞತೆ ಸಲ್ಲಿಸಿದರು.
ಸನ್ಮಾನ ಪಾತ್ರವನ್ನು ಡಾ.ಷಣ್ಮುಖ ಹೆಬ್ಬಾರ್ ವಾಚಿಸಿದರು. ಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಅಧ್ಯಯನ ಕೇಂದ್ರದ ಪ್ರಭಾರ ಪ್ರಾಂಶುಪಾಲ ಹರಿದಾಸ ಭಟ್ ಸ್ವಾಗತಿಸಿದರು. ಸಭೆಯ ಕೋಶಾಧಿಕಾರಿ ಚಂದ್ರ ಶೇಖರ ಆಚಾರ್ಯರು ಧನ್ಯವಾದ ಅರ್ಪಿಸಿದರು. ಡಾ.ಶಿವಪ್ರಸಾದ ತಂತ್ರಿಯವರು ಕಾರ್ಯಕ್ರಮ ನಿರ್ವಹಿಸಿದರು.