ವಿದ್ಯುತ್ ಮಾರ್ಗ ಸಂಚರಿಸುವ ಹಾದಿಯ ಮಾಹಿತಿಯನ್ನು ದ.ಕ. ಡಿಸಿ ಬಹಿರಂಗಪಡಿಸಲಿ : ಮನೋಹರ ಶೆಟ್ಟೆ
ವಿಟ್ಲ: ವಿದ್ಯುತ್ ಮಾರ್ಗ ಯೋಜನೆ ಜಾರಿ ಹಂತಕ್ಕೆ ತಲುಪಿದರೂ ಯೋಜನೆಯ ಸಮಗ್ರ ಮಾಹಿತಿ ಬಿಡುಗಡೆಗೊಳಿಸದಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ತಕ್ಷಣ ವಿದ್ಯುತ್ ಮಾರ್ಗ ಸಂಚರಿಸುವ ಹಾದಿಯ ಮಾಹಿತಿಯನ್ನು ಬಹಿರಂಗ ಪಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟೆ ನಡಿಕಂಬಳಗುತ್ತು ಆಗ್ರಾಹಿಸಿದ್ದಾರೆ.
ಅವರು ಉಡುಪಿ - ಕಾಸರಗೋಡು 400ಕೆವಿ ವಿದ್ಯುತ್ ಮಾರ್ಗ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರ ಸಭೆಯನ್ನುದ್ದೇಶಿ ಮಾತನಾಡಿದರು.
ಕೃಷಿ ಭೂಮಿಯನ್ನು ನಾಶ ಮಾಡಿಕೊಂಡು ಹೋಗುವ ವಿದ್ಯುತ್ ಮಾರ್ಗದ ಬದಲಾಗಿ ವಿದ್ಯುತ್ ಸ್ಥಾವರವನ್ನೇ ಕಾಸರಗೋಡು ಭಾಗದಲ್ಲಿ ನಿರ್ಮಾಣ ಮಾಡಲಿ. ರೈತರ ಹೋರಾಟ ಫಲವಾಗಿ ಹಲವಾರು ರೈತರಿಗೆ ತಮ್ಮ ಜಮೀನು ಉಳಿದಿದೆ. ಹೋರಾಟಗಳನ್ನು ನಡೆಸುವಾಗ ಅಪವಾದಗಳು ಸಹಜವಾಗಿರುತ್ತದೆ. ಜಿಲ್ಲೆಯ ಪ್ರತಿಯೊಬ್ಬ ರೈತರು ಈ ಹೋರಾಟದಲ್ಲಿ ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ರೈತರ ಹೆಸರಿನಲ್ಲಿ ಪ್ರಮಾಣವಚನ ಮಾಡಿ ರೈತರಿಗೇ ಅನ್ಯಾಯ ಮಾಡುವ ಕಾರ್ಯ ಮಾಡಲಾಗುತ್ತಿದೆ. ಜಿಲ್ಲೆಯ ರೈತರಿಗೆ ಯಾವುದೇ ವಿಚಾರದಲ್ಲಿ ಕುಂದುಕೊರತೆ ಬರುವ ರೀತಿ ಆಗಬಾರದು. ರೈತರ ಕೃಷಿ ಜಮೀನಿನಲ್ಲಿ 400 ಕೆವಿ ವಿದ್ಯುತ್ ಮಾರ್ಗ ಮಾಡುವ ಬದಲು ಸಮುದ್ರ ಮಾರ್ಗ, ರಾಷ್ಟ್ರೀಯ ಹೆದ್ದಾರಿ, ರೈಲ್ವೇ ಮಾರ್ಗದಲ್ಲಿ ಆದುನಿಕ ತಂತ್ರಜ್ಞಾನ ಬಳಸಿ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.