ಏಳೂವರೆ ಕೆಜಿ ಬೆಳ್ಳಿಯ ಆಭರಣ, 1.5 ಲಕ್ಷ ರೂ. ನಗದು ಸಹಿತ ಕಾರು ಉಳ್ಳಾಲದಲ್ಲಿ ಪತ್ತೆ
ಹೊಸಂಗಡಿಯ ಜ್ಯುವೆಲ್ಲರಿ ದರೋಡೆ ಪ್ರಕರಣ
ಮಂಜೇಶ್ವರ, ಜು.27: ಹೊಸಂಗಡಿಯ ರಾಜಧಾನಿ ಜುವೆಲ್ಲರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡಕ್ಕೆ ಮಹತ್ವದ ಸುಳಿವು ಲಭಿಸಿದ್ದು, ದರೋಡೆಕೋರರು ಬಂದಿದ್ದ ಕಾರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಕಾರಿನಿಂದ ಏಳೂವರೆ ಕಿಲೋ ಬೆಳ್ಳಿಯ ಆಭರಣ ಮತ್ತು ಒಂದೂವರೆ ಲಕ್ಷ ರೂ. ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು, ಬೆಳ್ಳಿಯ ಆಭರಣ ಮತ್ತು ನಗದನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದರೋಡೆಕೋರರು ಉಳಿದ ಆಭರಣ ಮತ್ತು ನಗದನ್ನು ಇನ್ನೊಂದು ಕಾರಿನಲ್ಲಿ ಕೊಂಡೊಯ್ದಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಕಾರು ಸುರತ್ಕಲ್ ನಿಂದ ಬಾಡಿಗೆಗೆ ಪಡೆದಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಜ್ಯುವೆಲ್ಲರಿಯಿಂದ ಸೋಮವಾರ ಮುಂಜಾನೆ ದರೋಡೆ ನಡೆದಿತ್ತು. ಮುಂಜಾನೆ 2 ಗಂಟೆ ಸುಮಾರಿಗೆ ಬಂದ ದರೋಡೆಕೋರರು ಕಾವಲುಗಾರನನ್ನು ಥಳಿಸಿ ಕಟ್ಟಿ ಹಾಕಿದ ಮೇಲೆ 15 ಕಿಲೋ ಬೆಳ್ಳಿಯ ಆಭರಣ ಹಾಗೂ ನಾಲ್ಕೂವರೆ ಲಕ್ಷ ರೂ. ದರೋಡೆ ಮಾಡಿದ್ದರು. ಗಾಯಗೊಂಡಿರುವ ಕಾವಲುಗಾರ ಅಬ್ದುಲ್ಲ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.