ಪುತ್ತೂರು: ಶಾಲಾ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಆರೋಪ; ಕಂದಾಯ ಇಲಾಖೆಯಿಂದ ಮನೆ ತೆರವು
ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕ ಶಾಲಾ ಬಳಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆಯ ವತಿಯಿಂದ ಮಂಗಳವಾರ ಮನೆಯನ್ನು ತೆರವು ಮಾಡಿದ ಘಟನೆ ನಡೆದಿದ್ದು, ಇದರಿಂದ ಮನನೊಂದ ಮನೆ ಮಾಲಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಳಮೊಗ್ರು ಗ್ರಾಮದ ಸರ್ವೆ ನಂ.207 ರಲ್ಲಿ ದರ್ಬೆತ್ತಡ್ಕ ಸರಕಾರಿ ಪ್ರಾಥಮಿಕ ಶಾಲೆಯ ಹೆಸರಿನಲ್ಲಿ ಜಾಗ ಇದೆ. ಶಾಲೆಯ ಮುಂಭಾಗದಲ್ಲಿರುವ ಗ್ರಾಪಂ ವತಿಯಿಂದ ನಿರ್ಮಾಣ ಮಾಡಿರುವ ಬಸ್ ತಂಗುದಾಣದ ಹಿಂಬದಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ರಘುನಾಥ್ ಎಂಬವರು ಕಳೆದ 12 ವರ್ಷಗಳಿಂದ ಶೆಡ್ ನಿರ್ಮಿಸಿ ವಾಸವಾಗಿದ್ದರು. ಕಳೆದ ಕೆಲವು ತಿಂಗಳ ಹಿಂದೆ ಶೆಡ್ಗೆ ಗೋಡೆಯನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಶಾಲಾ ಎಸ್ಡಿಎಂಸಿ ವಿರೋಧ ವ್ಯಕ್ತಪಡಿಸಿ ರಘುನಾಥ್ ವಾಸ್ತವ್ಯ ಇರುವ ಶೆಡ್ನ ಜಾಗ ದರ್ಬೆತ್ತಡ್ಕ ಶಾಲೆಗೆ ಸೇರಿದ್ದಾಗಿದ್ದು ಅಲ್ಲಿ ಮನೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಅಧಿಕಾರಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದರು. ಶೆಡ್ ಇರುವ ಸ್ಥಳದಲ್ಲಿ ಗೋಡೆ ನಿರ್ಮಾಣ ಮಾಡಿ ಮನೆ ಕಟ್ಟಡ ನಿರ್ಮಾಣ ಮಾಡದಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದರು. ಆದರೆ ಗೋಡೆ ನಿರ್ಮಾಣ ಕಾರ್ಯ ನಡೆದಿತ್ತು.
ಅಕ್ರಮವಾಗಿ ಮನೆ ನಿರ್ಮಾಣ ಮಾಡಿದ್ದಾಗಿ ಆರೋಪಿಸಿ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಜಾಗ ಶಾಲೆಗೆ ಸೇರಿದ್ದಾಗಿದ್ದು ಇಲ್ಲಿ ಮನೆ ನಿರ್ಮಾಣ ಮಾಡಿರುವುದು ತಪ್ಪು. ಮನೆಯನ್ನು ತೆರವು ಮಾಡುವಂತೆ ಮನೆ ಮಂದಿಗೆ ಮೂರು ತಿಂಗಳೊಳಗಾಗಿ ಬದಲಿ ವ್ಯವಸ್ಥೆಯನ್ನು ಮಾಡುವಂತೆ ಸೂಚನೆಯನ್ನು ನೀಡಿದ್ದರು. ಸೂಚನೆ ನೀಡಿ ಮೂರು ತಿಂಗಳು ಕಳೆದ ಬಳಿಕ ಮಂಗಳವಾರ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮನೆಯೊಳಗಿದ್ದ ಸಾಮಾಗ್ರಿಗಳನ್ನು ಹೊರಗಿಟ್ಟು ಜೆಸಿಬಿ ಯಂತ್ರದ ಮೂಲಕ ಮನೆಯನ್ನು ತೆರವುಗಿಳಿಸಿದರು.
ದರ್ಬೆತ್ತಡ್ಕ ಗುಡಿಸಲು ತೆರವು ಮಾಡಿದ ಕಂದಾಯ ಇಲಾಖೆ
ಮನೆಯನ್ನು ಕಳೆದುಕೊಂಡ ದಲಿತ ಕುಟುಂಬದ ಆಧಾರಸ್ಥಂಭವಾಗಿದ್ದ ರಘುನಾಥ ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆಂದು ತಿಳಿದು ಬಂದಿದೆ. ರಘುನಾಥ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ.
ಸ್ಥಳಕ್ಕೆ ದಲಿತ ಸಂಘಟನೆಗಳ ಮುಖಂಡರು ಆಗಮಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.