ಡಾ.ಅಮೀರ್ ಅಹ್ಮದ್ ಗೆ ತುಂಬೆ ಸಂತಾಪ ಸಭೆ
ಮಂಗಳೂರು, ಜು.28: ಮುಸ್ಲಿಂ ಜಸ್ಟೀಸ್ ಫೋರಮ್ ವತಿಯಿಂದ ಕಾಂಗ್ರೆಸ್ ಮುಖಂಡ ಡಾ.ಕೆ.ಎಸ್. ಅಮೀರ್ ಅಹ್ಮದ್ ತುಂಬೆ ಅವರಿಗೆ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಮುಸ್ಲಿಂ ಜಸ್ಟೀಸ್ ಫೋರಮ್ನ ಸ್ಥಾಪಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಅಮೀರ್ ತುಂಬೆ ಅವರದ್ದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಸದಾ ಜನಸೇವೆಯಲ್ಲೇ ತೊಡಗಿರುತ್ತಿದ್ದರು. ಚಿಕ್ಕ ವಯಸ್ಸಿನಲ್ಲೇ ಸಮಾಜಕ್ಕೆ ಅಗಾಧ ಕೊಡುಗೆ ನೀಡಿದ್ದಾರೆ. ಅಮೀರ್ ಅವರ ಸೇವಾ ಕಾರ್ಯ ಅನನ್ಯ ಎಂದು ಹೇಳಿದರು.
ಅಮೀರ್ ತುಂಬೆ ಅವರ ಚಿಕ್ಕಪ್ಪ ಅಬೂಬಕರ್ ಮಾತನಾಡಿ, ಬಡ ಕುಟುಂಬಗಳ ಕಣ್ಣೀರನ್ನು ಅಮೀರ್ ಒರೆಸಿದ್ದರು. ಅವರ ಜನ ಸೇವೆ ಇಡೀ ನಾಡಿಗೇ ತಿಳಿದಿದೆ. ಅಮೀರ್ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಆಶಿಸಿದರು.
ನ್ಯಾಯವಾದಿ ಮುಹಮ್ಮದ್ ಅಸ್ಗರ್ ಮಾತನಾಡಿ, ಯಾವುದೇ ಸಮಸ್ಯೆ ಇದ್ದರೆ ಕ್ಷಣ ಮಾತ್ರದಲ್ಲೇ ಬಗೆಹರಿಸುತ್ತಿದ್ದರು. ಅಮೀರ್ ಹಗಲಿರುಳು ಕೆಲಸ ಮಾಡಿದ್ದಾರೆ. ತಮ್ಮ ಜೀವನವನ್ನೇ ಜನಸೇವೆಗೆ ಮುಡಿಪಾಗಿಟ್ಟಿದ್ದರು ಎಂದರು.
ಅಮೀರ್ ಅವರ ಸಹೋದರ ಅಬ್ದುಲ್ ಲತೀಫ್, ಮುಸ್ಲಿಂ ಜಸ್ಟೀಸ್ ಫೋರಮ್ನ ಉಪಾಧ್ಯಕ್ಷ ಸಲೀಮ್, ಮುಹಮ್ಮದ್ ಸಜಿಪ, ಹನೀಫ್ ಹಾಜಿ ಕೊಡಾಜೆ, ಎಂ.ಎಚ್. ಬಾವಾ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಮುಖ್ತಾರ್ ಕಿರಾಅತ್ ಪಠಿಸಿದರು. ವಹಾಬ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.