ಉಡುಪಿ: ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಐದು ತಿಂಗಳ ಕಂದಮ್ಮ ಮೃತ್ಯು
ಈ ಮಗುವಿಗೆ ಬೇಕಿತ್ತು 16 ಕೋಟಿ ರೂ. ಬೆಲೆಯ ಇಂಜೆಕ್ಷನ್
ಉಡುಪಿ, ಜು.29: ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂಬ ಅತ್ಯಂತ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಉಡುಪಿಯ ಐದು ತಿಂಗಳ ಮಗು ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದೆ.
ಕಾರ್ಕಳ ತಾಲೂಕು ಬೆಳ್ಮಣ್ನ ಸಂದೀಪ್ ಹಾಗೂ ರಂಜಿತಾ ದಂಪತಿಗೆ ಐದು ತಿಂಗಳ ಮಿಥಾನ್ಶ್ ದೇವಾಡಿಗ ಎಂಬ ಮಗು ಜನಿಸಿ ಒಂದೂವರೆ ತಿಂಗಳಾಗಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿತ್ತು. ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದ ವೈದ್ಯರು ಇದೊಂದು ಅಪರೂಪದ ಕಾಯಿಲೆ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು.
ನಂತರ ಮಗುವಿನ ಪೋಷಕರು ಮುಂಬೈನ ಹಿಂದೂಜಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ತಜ್ಞ ವೈದ್ಯರಿಗೆ ಮಗುವನ್ನು ತೋರಿಸಿದಾಗ ಹಾರ್ಮೋನ್ ವ್ಯತ್ಯಾಸದಿಂದ ಉಂಟಾಗುವ ಸ್ಪೈನಲ್ ಮಸ್ಕುಲರ್ ಆಟ್ರೋಫಿ (ಎಸ್ಎಂಎ) ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪೂಪದ ಕಾಯಿಲೆ ಎಂದು ಗೊತ್ತಾಗಿದೆ.
ಮಿಥಾನ್ಶ್ ಎಲ್ಲರಂತೆ ಆರೋಗ್ಯವಾಗಿರಲು ಹೊರದೇಶದಿಂದ 16 ಕೋಟಿಯ ಇಂಜೆಕ್ಷನ್ ತರಿಸಬೇಕು ಅಂತ ವೈದ್ಯರು ಹೇಳಿದ್ದರು. ಪೋಷಕರು ಕಂದನನ್ನು ಉಳಿಸಲು ಕ್ರೌಡ್ ಪಂಡಿಂಗ್ ಮೊರೆ ಹೋಗಿ ಹಣ ಹೊಂದಿಸಲು ಪ್ರಯತ್ನ ನಡೆಸಿದ್ದರು. ಆದರೆ ದುರದೃಷ್ಟವಶಾತ್ ಮಿಥಾನ್ಶ್ ದೇವಾಡಿಗ ಇಂದು ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.