ಹಡಲು ಭೂಮಿಯಲ್ಲಿ ನೇಜಿ ನೆಟ್ಟು ಕೃಷಿಪ್ರೇಮ ತೋರಿದ ಪತ್ರಕರ್ತರು!
ಉಡುಪಿ, ಆ.1: ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಹಾರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊನ್ನಾಳ ಕಂಬಳಗದ್ದೆ ಮನೆ ಬಳಿಯ ಹಡಿಲು ಭೂಮಿಯಲ್ಲಿ ಇಂದು ನಡೆದ ಕೃಷಿ ನಾಟಿ ಕಾರ್ಯದ ಸಮಾರೋಪದಲ್ಲಿ ಉಡುಪಿ ಜಿಲ್ಲೆಯ ಪತ್ರಕರ್ತರು ಪಾಲ್ಗೊಳ್ಳುವ ಮೂಲಕ ಕೃಷಿ ಪ್ರೇಮ ಪ್ರದರ್ಶಿಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ನೇತೃತ್ವದಲ್ಲಿ ಜಿಲ್ಲೆಯ 30ಕ್ಕೂ ಅಧಿಕ ಪತ್ರಕರ್ತರು ಗದ್ದೆಗೆ ಇಳಿದು ನೇಜಿ ನೆಟ್ಟುವ ಕಾರ್ಯ ಮಾಡಿದರು. ಇವರೊಂದಿಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಕೂಡ ಮಧ್ಯಾಹ್ನದವರೆಗೆ ಗದ್ದೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.
ಇದಕ್ಕೂ ಮುನ್ನ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಬ್ರಹ್ಮಾವರ ಜಿ.ಎಂ ಎಜುಕೇಶನ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಪ್ರಕಾಶ್ ಚಂದ್ರ ಶೆಟ್ಟಿ, ರಾಜೇಶ್ ಶೆಟ್ಟಿ ಅಲೆವೂರು, ಕೃಷಿಕ ಹಾಗೂ ಪತ್ರಕರ್ತ ಅಜಿತ್ ಆರಾಡಿ ಯೊಂದಿಗೆ ಶಾಸಕ ಕೆ. ರಘುಪತಿ ಭಟ್ ಭೂ ಮಾತೆಗೆ ಹಾಲು ಅರ್ಪಿಸಿ ನೇಜಿ ನೀಡುವ ಮೂಲಕ ಯಂತ್ರ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಾರಾಡಿ ಗ್ರಾಪಂ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಸ್ಥಳೀಯರಾದ ಎ.ಬಾಲಕೃಷ್ಣ ಶೆಟ್ಟಿ, ಅಬು ಸಾಹೇಬ್, ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧಿಕಾರಿ ಡಾ.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.