ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ
ಉಡುಪಿ, ಆ.1: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಪೊಲೀಸರು ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಬಬ್ಬುಸ್ವಾಮಿ ದೈವಸ್ಥಾನದ ಎದುರು ಜು.31ರಂದು ಸಂಜೆ 7.45ರ ಸುಮಾರಿಗೆ ಬಂಧಿಸಿದ್ದಾರೆ.
ಮಂಗಳೂರು ಸೋಮೇಶ್ವರದ ಕುಂಪಳದ ಕಾರ್ತಿಕ್(24) ಹಾಗೂ ತೇಜಸ್ (18) ಬಂಧಿತ ಆರೋಪಿಗಳು. ಬಂಧಿತರಿಂದ 40 ಸಾವಿರ ರೂ. ಮೌಲ್ಯದ 1 ಕಿಲೋ 226 ಗ್ರಾಂ ತೂಕದ ಗಾಂಜಾ, ಗಿರಾಕಿಗಳನ್ನು ಕುದುರಿಸಲು ಬಳಸಿದ್ದ 20 ಸಾವಿರ ರೂ. ಮೌಲ್ಯದ 2 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ 75 ಸಾವಿರ ರೂ. ಮೌಲ್ಯದ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣಾ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎಸ್ಸೈ ಲಕ್ಷ್ಮಣ್, ಎಎಸ್ಸೈ ಕೇಶವ ಗೌಡ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ಪ್ರವೀಣ್, ರಾಘವೇಂದ್ರ ಉಪ್ಪೂರು ಮತ್ತು ಪ್ರಸನ್ನ ಸಾಲಿಯಾನ್ ಪಾಲ್ಗೊಂಡಿದ್ದಾರೆ.
Next Story