ಮಂಗಳೂರು: ಅಕ್ರಮವಾಗಿ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಶ್ರೀಲಂಕಾ ಪ್ರಜೆಗಳು ಬೆಂಗಳೂರಿಗೆ ಸ್ಥಳಾಂತರ
ಮಂಗಳೂರು, ಆ.5: ಅಕ್ರಮವಾಗಿ ಗಡಿ ಪ್ರವೇಶಿಸಿ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
ಕಳೆದ ತಿಂಗಳು ಮಂಗಳೂರಿನ ವಿವಿಧ ಕಡೆಗಳಲ್ಲಿ ಅಕ್ರಮ ವಾಸ್ತವ್ಯ ಹೊಂದಿದ್ದ ಆರೋಪದಲ್ಲಿ 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಈ ವೇಳೆ ಶ್ರೀಲಂಕಾ ಪ್ರಜೆಗಳು ಅಕ್ರಮವಾಗಿ ಗಡಿ ದಾಟಿ ತಮಿಳುನಾಡು ಮೂಲಕ ಕೆನಡಾಗೆ ತೆರಳುವ ಉದ್ದೇಶ ಹೊಂದಿರುವುದು ಬೆಳಕಿಗೆ ಬಂದಿತ್ತು. ತಮಿಳುನಾಡಿನಲ್ಲಿ ಚುನಾವಣೆಯ ಕಾರಣ ಕರ್ನಾಟಕಕ್ಕೆ ಆಗಮಿಸಿದ್ದರು. ಬೆಂಗಳೂರು ಮೂಲಕ 38 ಮಂದಿ ಮಂಗಳೂರಿಗೆ ಆಗಮಿಸಿದಾಗ ಮಂಗಳೂರು ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಭಾರತಕ್ಕೆ ಅಕ್ರಮ ಪ್ರವೇಶ ಹಾಗೂ ಅಕ್ರಮ ವಾಸ್ತವ್ಯ ದೃಢಪಟ್ಟಿದ್ದು, ಈ ಬಗ್ಗೆ ಮಂಗಳೂರು ಪೊಲೀಸರು ಕೇಸು ದಾಖಲಿಸಿದ್ದರು. ಬಳಿಕ ಮಂಗಳೂರು ಜೈಲಿನಲ್ಲಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು.
ಶ್ರೀಲಂಕಾದ ನಿಷೇಧಿತ ಸಂಘಟನೆ ಎಲ್ಟಿಟಿಇ ಜೊತೆ ನಂಟಿನ ಶಂಕೆ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ನೀಡಲಾಗಿತ್ತು. ಎನ್ಐಎ ಅಧಿಕಾರಿಗಳು ಮಂಗಳೂರಿಗೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದರು.
ಎನ್ಐಎ ತನಿಖೆಗೆ ನೆರವಾಗುವ ದಿಶೆಯಲ್ಲಿ ಮಂಗಳೂರಿನಲ್ಲೇ ವಿದೇಶಿ ಪ್ರಜೆಗಳಿಗೆ ತಾತ್ಕಾಲಿಕ ಕಾರಾಗೃಹ ವ್ಯವಸ್ಥೆಗೆ ಪೊಲೀಸ್ ಕಮಿಷನರ್ ಅವರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದರು. ಸಮಾಜಕಲ್ಯಾಣ ಇಲಾಖೆ ತಾತ್ಕಾಲಿಕ ಬಂಧಿಖಾನೆ ವ್ಯವಸ್ಥೆ ಮಾಡಲು ಮುಂದಾಗಿತ್ತು.
ಮಂಗಳೂರಿನಲ್ಲಿ ಬಂಧಿತ 38 ಮಂದಿ ಶ್ರೀಲಂಕಾ ಪ್ರಜೆಗಳ ಪೈಕಿ ಓರ್ವನಿಗೆ ಶ್ರೀಲಂಕಾದ ನಿಷೇಧಿತ ಸಂಘಟನೆ ಎಲ್ಟಿಟಿಇ ಜೊತೆ ನಂಟು ಹೊಂದಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು.
ಎಲ್ಟಿಟಿಇಗೆ ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಬಂಧಿತ ವ್ಯಕ್ತಿಯೊಬ್ಬ ಇರುವುದು ಗೊತ್ತಾಗಿದೆ. ಈತನಿಗೆ ತಮಿಳುನಾಡಿನಲ್ಲಿ ಬಂಧಿತ ಎಲ್ಟಿಟಿಇ ಬೆಂಬಲಿಗ ದಿನಕರನ್ ಜೊತೆ ಸಂಪರ್ಕ ಇತ್ತು ಎನ್ನಲಾಗಿದೆ.
ಮಂಗಳೂರಿನಂತೆ ಬೆಂಗಳೂರಿನಲ್ಲೂ ಶ್ರೀಲಂಕಾ ಪ್ರಜೆಗಳನ್ನು ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ವಿಚಾರ ಇದಾಗಿರುವುದರಿಂದ ಬೆಂಗಳೂರಿನಲ್ಲೇ ವಿಸ್ತೃತ ತನಿಖೆ ನಡೆಸಲು ಎನ್ಐಎ ನಿರ್ಧರಿಸಿದೆ. ಹೀಗಾಗಿ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರಿನಿಂದ ಬೆಂಗಳೂರಿನ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.