ಹಂಗರಕಟ್ಟೆ: ಎಟಿಎಂ ಒಡೆದು ಹಣ ದೋಚಿದ ಕಳ್ಳರು
ಕೋಟ ಆ.13: ಮಾಬುಕಳ ಬಸ್ ನಿಲ್ದಾಣದ ಹತ್ತಿರದ ಹೆಬ್ಬಾರ್ ಕಾಂಪ್ಲೆಕ್ಸ್ ನಲ್ಲಿರುವ ಹಂಗರಕಟ್ಟೆ ಶಾಖೆಯ ಕೆನರಾ ಬ್ಯಾಂಕ್ ಎಟಿಎಂಗೆ ಕನ್ನ ಹಾಕಿರುವುದು ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಗುರುವಾರ ತಡ ರಾತ್ರಿ ಕಳ್ಳರು ಎಟಿಎಂ ಹೊರಗಡೆ ಇರುವ ಸಿಸಿಟಿವಿ ಕ್ಯಾಮರಾ ಹಾಗೂ ಸೈರನ್ ಕೇಬಲ್ ನ್ನು ತುಂಡು ಮಾಡಿದ್ದು, ಒಳಗಡೆ ಇದ್ದ ಎಟಿಎಂ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೂರ್ತಿಯಾಗಿ ಒಡೆಯಲು ಸಾಧ್ಯವಾಗದಿದ್ದರೂ ರಿಜೆಕ್ಟ್ ಬಾಕ್ಸ್ ನಲ್ಲಿರುವ ಸುಮಾರು 17,000 ರೂ. ನಗದು ದೋಚಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ಕಳ್ಳರು ಎಟಿಎಂ ಕೋಣೆಯ ಎ.ಸಿ.ಯನ್ನೂ ಕದ್ದೊಯ್ಯಲು ವಿಫಲ ಯತ್ನ ಮಾಡಿರುವುದು ಕಂಡು ಬಂದಿದೆ.
ಸ್ಥಳಕ್ಕಾಗಮಿಸಿದ ಅಡಿಷನಲ್ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಸುಧಾಕರ್ ನಾಯ್ಕ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಬ್ರಹ್ಮಾವರ ಠಾಣಾಧಿಕಾರಿ ಗುರುನಾಥ್ ಹಾದಿಮನೆ, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. = ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೆನರ ಬ್ಯಾಂಕ್ ಎಜಿಎಂ ಜಗದೀಶ್ ಶೈಣೆ, ಸೀನಿಯರ್ ಮ್ಯಾನೇಜರ್ ಮನೋಜ್ ಕಾಮತ್ ಹಾಗೂ ಬ್ಯಾಂಕ್ ಮ್ಯಾನೇಜರ್ ಶಿಲ್ಪಾ ಹಾಜರಿದ್ದರು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನೆಡೆಸುತ್ತಿದ್ದಾರೆ.