ಬೈಂದೂರು: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು
ಬೈಂದೂರು, ಆ.23: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಮಗುಚಿದ ಪರಿಣಾಮ ಮೀನುಗಾರರೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ಪಡುವರಿ ಗ್ರಾಮದ ತಾರಾಪತಿ ಎಂಬಲ್ಲಿ ಆ.22ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ರಾಮದಾಸ್ ಖಾರ್ವಿ(58) ಎಂದು ಗುರುತಿಸಲಾಗಿದೆ. ಇವರು ಉಪ್ಪುಂದದ ಮಂಜುನಾಥ ಖಾರ್ವಿ ಎಂಬವರ ದಿವ್ಯ ಗಣೇಶ ರಾಣಿ ಬಲೆ ದೋಣಿಯಲ್ಲಿ ಇತರ ಮೀನುಗಾರರೊಂದಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿನ ಬೃಹತ್ ಅಲೆಯಿಂದ ದೋಣಿ ಮಗುಚಿದ ಪರಿಣಾಮ ರಾಮದಾಸ್ ಖಾರ್ವಿ ಆಯತಪ್ಪಿ ನೀರಿಗೆ ಬಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಇವರನ್ನು ಕೂಡಲೇ ಮೇಲಕ್ಕೆತ್ತಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ರಾಮದಾಸ್ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story