ಉಡುಪಿ: ತಾಯಿ ಮಕ್ಕಳ ಆಸ್ಪತ್ರೆಯ ನೌಕರರ ಅಹೋರಾತ್ರಿ ಮುಷ್ಕರ ಮುಂದುವರಿಕೆ
ಉಡುಪಿ, ಆ.26: ಬಾಕಿ ಸಂಬಳ ಪಾವಾತಿಗಾಗಿ ಹೋರಾಟ ನಡೆಸುತ್ತಿರುವ ಪ್ರಮುಖ 16 ಮಂದಿ ನೌಕರರನ್ನು ಆಡಳಿತ ಮಂಡಳಿ ವಜಾಗೊಳಿಸಿರುವುದಾಗಿ ಆರೋಪಿಸಿ ಬಿ.ಆರ್.ಶೆಟ್ಟಿ ಗ್ರೂಪ್ ಮುನ್ನಡೆಸುತ್ತಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳು ನಡೆಸುತ್ತಿರುವ ಅಹೋರಾತ್ರಿ ಮುಷ್ಕರ ಮೂರನೇ ದಿನವಾದ ಗುರುವಾರವೂ ಮುಂದುವರೆದಿದೆ.
ಮುಷ್ಕರಕ್ಕೆ ದಸಂಸ ಬೆಂಬಲ: ಆಸ್ಪತ್ರೆಯ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯು ನೌಕರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಇಂದು ಸಂತ್ರಸ್ತ ನೌಕರರನ್ನು ಸ್ಥಳದಲ್ಲಿ ಭೇಟಿಯಾಗಿ ಧೈರ್ಯ ತುಂಬಿ ಮನವಿ ಸ್ವೀಕರಿಸಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣೆವೇ ವಜಾಗೊಳಿಸಿದ ನೌಕರರನ್ನು ವಾಪಾಸ್ಸು ನೌಕರಿಗೆ ಸೇರಿಸಿ ಕೊಂಡು ಬಾಕಿ ವೇತನವನ್ನು ಪಾವತಿಸಬೇಕು. ಜಿಲ್ಲಾಧಿಕಾರಿ ಕೂಡಲೇ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಅವರು ಜಿಲ್ಲಾಧಿಕಾರಿ ಬಳಿ ಫೋನಿನಲ್ಲಿ ಸಮಾಲೋಚನೆ ನಡೆಸಿ ಸೂಕ್ತ ನ್ಯಾಯ ಒದಗಿಸಲು ಆಗ್ರಹಿಸಿದರು. ಕೂಡಲೇ ವಜಾಗೊಂಡ ಆಸ್ಪತ್ರೆಯ ನೌಕರರಿಗೆ ಸೂಕ್ತ ನ್ಯಾಯ ಒದಗಿಸಿದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ ಬಾಳ್ಕುದ್ರು, ಶ್ಯಾಮ ಸುಂದರ ತೆಕ್ಕಟ್ಟೆ, ಶ್ರೀಧರ, ಅಣ್ಣಪ್ಪ ನಕೆ, ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ, ವಿಠಲ ಉಚ್ಚಿಲ, ಶ್ರೀನಿವಾಸ ವಡ್ಡಸೆಶ್ರ, ದೇವು ಹೆಬ್ರಿ, ನಾಗರಾಜ ಕುಂದಾಪುರ, ರಾಘವ ಕುಕುಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಲಿಡಾರಿಟಿ ಯೂತ್ಮೂವ್ಮೆಂಟ್: ಉಡುಪಿ: ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ 16 ಸಿಬ್ಬಂದಿಗಳನ್ನು ಕೋರೊನ ಕಾಲದ ಬಿಕ್ಕಟ್ಟಿನ ನೆಪವೊಡ್ಡಿ ಏಕಾಏಕಿ ವಜಾ ಮಾಡಿರುವುದು ಅಮಾನವೀಯವಾಗಿದೆ. ಆಡಳಿತ ಮಂಡಳಿಯ ಕ್ರಮವನ್ನು ಉಡುಪಿಯ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತೀವ್ರವಾಗಿ ಖಂಡಿಸಿದೆ.
ಸಿಬ್ಬಂದಿಗಳನ್ನು ಏಕಾಏಕಿ ವಜಾಗೊಳಿಸಿ ಅವರ ಜೀವನದೊಂದಿಗೆ ಚೆಲ್ಲಾಟವಾಡುವುದು ಸೂಕ್ತವಲ್ಲ. ಸರಕಾರ ಮಧ್ಯೆ ಪ್ರವೇಶಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಅದರೊಂದಿಗೆ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸರಕಾರವೇ ನಿರ್ವಹಿಸಬೇಕೆಂದು ಜಿಲ್ಲಾ ಕಾರ್ಯದರ್ಶಿ ಝಕ್ರಿಯಾ ಕೋಡಿಬೆಂಗ್ರೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಸಿಐಟಿಯು ಬೆಂಬಲ: ಆಸ್ಪತ್ರೆಯ ಆಡಳಿತ ಮಂಡಳಿಯು 16 ಮಂದಿ ಸಿಬ್ಬಂದಿಯನ್ನು ಕೋವಿಡ್ ಕಾರಣ ಹೇಳಿ ಏಕಾಏಕಿ ವಜಾ ಗೊಳಿಸಿದ ಕ್ರಮವನ್ನು ಸಿಐಟಿಯು ಉಡುಪಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ.
ವಜಾ ಆಗಿರುವ ಎಲ್ಲ 16 ನೌಕರರನ್ನು ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳ ಬೇಕು ಹಾಗೂ ಬಾಕಿ ಇರುವ ಎಲ್ಲಾ ವೇತನವನ್ನು ಕೂಡಲೇ ನೀಡಬೇಕೆಂದು ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಒತ್ತಾಯಿಸಿದ್ದಾರೆ.