ಪೆರ್ಡೂರು: ನಿವೃತ್ತ ಶಿಕ್ಷಕ ಸಂಶಯಾಸ್ಪದ ಸಾವು
ಪೆರ್ಡೂರು, ಆ.27: ಪೆರ್ಡೂರು ಅಲಂಗಾರಿನ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ನಿವೃತ್ತ ಶಿಕ್ಷಕ ಪ್ರಭಾಕರ ಶೆಟ್ಟಿ ಅವರ ಮೃತದೇಹ ಆ.26ರಂದು ಮನೆಯ ಬಾವಿಯಲ್ಲಿ ಪತ್ತೆಯಾಗಿದೆ. ತಂದೆಯವರ ಮರಣದ ಬಗ್ಗೆ ತಮಗೆ ಸಂಶಯವಿರುವುದಾಗಿ ಮೃತರ ಮಗಳು ಸುಸ್ಮೀತಾ ಶೆಟ್ಟಿ ಹಿರಿಯಡ್ಕ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಾವು ತಮ್ಮ ಮಗಳು ಹಾಗೂ ತಾಯಿಯೊಂದಿಗೆ ಮಂಗಳೂರಿನ ಬಿಜೈನಲ್ಲಿ ವಾಸವಾಗಿದ್ದು, ತಂದೆಯವರು ಪೆರ್ಡೂರಿನ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡು ಏಕಾಂಗಿಯಾಗಿ ವಾಸವಾಗಿದ್ದರು. ತಾಯಿ ಮತ್ತು ತಾನು ಆಗಾಗ ಬಂದು ತಂದೆಯನ್ನು ನೋಡಿಕೊಂಡು ಹೋಗುತಿದ್ದುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆ.24ರಂದು ಅಪರಾಹ್ನ 2:20ಕ್ಕೆ ತಂದೆ, ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡುತಿದ್ದು, 26ರಂದು ಬೆಳಗ್ಗೆ 11 ಗಂಟೆಗೆ ಅವರ ದೇಹ ಮನೆಯ ಬಾವಿಯಲ್ಲಿ ತೇಲುತ್ತಿರುವುದನ್ನು ಕಂಡಿರುವುದಾಗಿ ಕೆಲಸಕ್ಕೆ ಬಂದ ಬಾಲಕೃಷ್ಣ ತಿಳಿಸಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ. ತಾವು ಅಮ್ಮನೊಂದಿಗೆ ಅಲಂಗಾರಿನ ಮನೆಗೆ ಬಂದು ನೋಡಿದಾಗ ಕವುಚಿ ಬಿದ್ದು ತೇಲುವ ಸ್ಥಿತಿಯಲ್ಲಿ ತಂದೆಯವರ ಮೃತದೇಹ ಕಂಡುಬಂದಿದೆ ಹೇಳಿದ್ದಾರೆ.
ಬಾವಿಗೆ ಆವರಣ ಇರಲಿಲ್ಲ. ನೀರು ಸೇದಲು ಹಾಕಿದ್ದ ದಂಡಿಗೆ ಜಾರಿದೆ. ಪಂಪಿಗೆ ಕಟ್ಟಿದ ವಯರ್ ತುಂಡಾಗಿದೆ. ಮನೆಯ ಬಾಗಿಲು ತೆರೆದಿದ್ದು, ಮನೆಯ ಒಳಗಿನ ಗೋಡ್ರೇಜ್ ಬಾಗಿಲು ತೆರೆದಿದೆ. ಹೀಗಾಗಿ ಅವರ ಸಾವಿನಲ್ಲಿ ತಮಗೆ ಸಂಶಯವಿದೆ ಎಂದು ಸುಸ್ಮೀತಾ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಿರಿಯಡ್ಕ ಪೊಲೀಸರು ತನಿಖೆ ನಡೆಸುತಿದ್ದಾರೆ.