ಕ್ರೈಂ ಬ್ರಾಂಚ್ ಎದುರು ವಿಚಾರಣೆಗೆ ಹಾಜರಾದ ಸುರೇಂದ್ರನ್
ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣ
ಕಾಸರಗೋಡು, ಸೆ.16: ಕಳೆದ ಕೇರಳ ವಿಧಾನಸಭಾ ಚುನಾವಣೆಯ ವೇಳೆ ಬಿಎಸ್ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಇಂದು ಕ್ರೈಂ ಬ್ರಾಂಚ್ ಎದುರು ವಿಚಾರಣೆಗೆ ಹಾಜರಾದರು.
ಎಪ್ರಿಲ್ ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುರೇಂದ್ರನ್ ಅವರನ್ನು ಈ ಲಂಚ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಖುದ್ದು ಹಾಜರಾಗುವಂತೆ ಕ್ರೈಂ ಬ್ರಾಂಚ್ ನೋಟಿಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಪೂರ್ವಾಹ್ನ 11 ಗಂಟೆಗೆ ಕ್ರೈಂ ಬ್ರಾಂಚ್ ಎದುರು ಹಾಜರಾದರು. ಕಾಸರಗೋಡು ಅತಿಥಿಗೃಹದಲ್ಲಿ ಅವರನ್ನು ಕ್ರೈಂ ಬ್ರಾಂಚ್ ವಿಚಾರಣೆಗೆ ಒಳಪಡಿಸಿತು.
ಏನಿದು ಪ್ರಕರಣ?: ಕಳೆದ ಎಪ್ರಿಲ್ 6ರಂದು ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರರನ್ನು ಕಣದಿಂದ ಹಿಂದಕ್ಕೆ ಸರಿಯಲು ಎರಡು ಲಕ್ಷ ರೂ. ನಗದು ಹಾಗೂ ಮೊಬೈಲ್ ಫೋನ್ ನೀಡಿದ್ದಾಗಿ ಇದಲ್ಲದೆ ಇನ್ನಿತರ ಅಮಿಷ ನೀಡಿದ್ದಾಗಿ ದೂರು ದಾಖಲಾಗಿದೆ. ಯುವ ಮೋರ್ಚಾ ರಾಜ್ಯ ಮುಖಂಡ ಸುನೀಲ್ ನಾಯ್ಕ್ ಹಾಗೂ ಪಕ್ಷದ ಇತರ ಪ್ರಮುಖರು ಮಾರ್ಚ್ 21 ರಂದು ಸುಂದರ ಅವರ ಪೆರ್ಲದಲ್ಲಿರುವ ಮನೆಗೆ ತರೆಳಿ ನಗದು ಹಾಗೂ ಸ್ಮಾರ್ಟ್ ಫೋನ್ ನೀಡಿದ್ದಲ್ಲದೆ, ಸುರೇಂದ್ರನ್ ಗೆದ್ದಲ್ಲಿ ಮಂಗಳೂರಿನಲ್ಲಿ ಬಾರ್ ಲೈಸೆನ್ಸ್ ಹಾಗೂ ಇನ್ನಿತರ ಆಮಿಷವೊಡ್ಡಿದ್ದರು ಎಂದು ಚುನಾವಣೆ ಕಳೆದು ಒಂದು ತಿಂಗಳ ಬಳಿಕ ಸುಂದರ ಬಹಿರಂಗಪಡಿಸಿದ್ದರು. ಈ ಸಂಬಂಧ ಮಂಜೇಶ್ವರ ದ ಸಿಪಿಎಂ ಅಭ್ಯರ್ಥಿಯಾಗಿದ್ದ ವಿ.ವಿ.ರಮೇಶ ನ್ ಪೊಲೀಸ್ ದೂರು ಸಲ್ಲಿಸಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶದಂತೆ ಕೆ.ಸುರೇಂದ್ರನ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ತನಿಖೆಯನ್ನು ಬದಿಯಡ್ಕ ಪೊಲೀಸರಿಂದ ಕ್ರೈಂ ಬ್ರಾಂಚ್ ಗೆ ವರ್ಗಾಯಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಯುವ ಮೋರ್ಚಾ ರಾಜ್ಯ ಮುಖಂಡ ಸುನೀಲ್ ನಾಯ್ಕ್, ಬಿಜೆಪಿ ಜಿಲ್ಲಾ ಮುಖಂಡರಾದ ಮಣಿಕಂಠ ರೈ, ವಿ.ಬಾಲಕೃಷ್ಣ ಶೆಟ್ಟಿ ಹಾಗೂ ಇನ್ನಿತರ ಮುಖಂಡರನ್ನು ಕ್ರೈಂ ಬ್ರಾಂಚ್ ತನಿಖೆಗೊಳಪಡಿಸಿತ್ತು. ಅದರಂತೆ ಕೆ. ಸುರೇಂದ್ರ ನ್ ರನ್ನು ತನಿಖೆಗೊಳಪಡಿಸಲು ತೀರ್ಮಾನಿಸಿದ್ದ ಕ್ರೈಂ ಬ್ರಾಂಚ್ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.