ಮಾಬುಕಳ ಸೇತುವೆಯಲ್ಲಿ ಚಲಿಸುತಿದ್ದ ಆ್ಯಂಬುಲೆನ್ಸ್ ಟಯರ್ ಸ್ಫೋಟ: ತಪ್ಪಿದ ದೊಡ್ಡ ದುರಂತ
ಕೋಟ ಸೆ.16: ಚಲಿಸುತಿದ್ದ ಆ್ಯಂಬುಲೆನ್ಸ್ ಟಯರೊಂದು ಸ್ಫೋಟಗೊಂಡು ಸೇತುವೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಘಟನೆ ಗುರುವಾರ ಬೆಳಗ್ಗೆ 9:45ರ ಸುಮಾರಿಗೆ ಮಾಬುಕಳದ ಸೀತಾನದಿ ಸೇತುವೆ ಮೇಲೆ ಸಂಭವಿಸಿದೆ.
ಶಿರಸಿಯಿಂದ ಅನಾರೋಗ್ಯ ಪೀಡಿತ ಮಗುವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತರುತ್ತಿದ್ದ ವೇಳೆ ಆ್ಯಂಬುಲೆನ್ಸ್ ವಾಹನದ ಟಯರು ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಸುಮಾರು 50 ಮೀ. ದೊರಕ್ಕೆ ಚಲಿಸಿ ಸೇತುವೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದೆ.
ಅದೃಷ್ಟವಶಾತ್ ಆ್ಯಂಬುಲೆನ್ಸ್ ವಾಹನ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲಿ ಬಚಾವ್ ಆಗಿದ್ದು, ಇದರಿಂದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಆ್ಯಂಬುಲೆನ್ಸ್ ನಲ್ಲಿ ಮಗು ಹಾಗೂ ಮಗುವಿನ ತಂದೆ ತಾಯಿ, ಮಗುವಿನ ಅಜ್ಜಿ ಮತ್ತು ಆ್ಯಂಬುಲೆನ್ಸ್ ಚಾಲಕ ಈ ಐವರು ಪ್ರಯಾಣಿಸುತ್ತಿದ್ದು. ಈ ಘಟನೆಯಲ್ಲಿ ಮಗುವಿನ ತಾಯಿಯ ತಲೆಗೆ ಬಲವಾದ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಕೋಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ