ನಾಪತ್ತೆಯಾಗಿದ್ದ ಶ್ಯಾಮ ಕೋಟ್ಯಾನ್ ಮೃತದೇಹ ಪತ್ತೆ
ಅಜೆಕಾರು, ಸೆ.16: ಎರಡು ದಿನಗಳ ಹಿಂದೆ ನಾಪತ್ತೆಯಾಗಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾದ ನಿಟ್ಟೆ ಗ್ರಾಮದ ಮಜಾಲು ಮನೆ ನಿವಾಸಿ ಶ್ಯಾಮ್ ಕೋಟ್ಯಾನ್ (65) ಅವರ ಶವ ಇಂದು ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಪಟ್ಟದ ಬಳಿಯ ಸ್ವರ್ಣ ನದಿಯಲ್ಲಿ ಪತ್ತೆಯಾಗಿದೆ.
ಪೊಲೀಸರಿಂದ ಬಂದ ಮಾಹಿತಿಯಂತೆ ದೂರು ದಾಖಲಿಸಿದ ಕೋಟ್ಯಾನ್ರ ಮಗಳು ಅಖಿಲಾ ಅಜೆಕಾರು ಶವಾಗಾರದಲ್ಲಿರಿಸಿದ ಮೃತದೇಹವನ್ನು ತನ್ನ ತಂದೆಯದೇ ಎಂದು ಗುರುತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಡುಬಿದ್ರಿ ಹೊಟೇಲಿನಲ್ಲಿ ಕೆಲಸ ಮಾಡುತಿದ್ದ ಕೋಟ್ಯಾನ್ ಕೆಲವು ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲಿ ಹೆಂಡತಿಯೊಂದಿಗೆ ವಾಸವಾಗಿದ್ದು, ಸೆ.13ರಂದು ಬೆಳಗ್ಗೆ 6ಗಂಟೆಗೆ ಮನೆಯಿಂದ ಹೊರಟವರು ನಾಪತ್ತೆಯಾಗಿದ್ದರು.
ತನಗಿದ್ದ ಮಧುಮೇಹ ಕಾಯಿಲೆ ಹಾಗೂ ಚರ್ಮದ ಅಲರ್ಜಿಯಿಂದ ಬೇಸತ್ತು ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story