‘ದೇಶದ ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ’
ಉಡುಪಿ, ಸೆ.18: ವಿಶ್ವಕರ್ಮರು ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಜಗದ್ಗುರುಗಳು. ಭಾರತದಲ್ಲಿ ಇಂದು ಕಾಣುತ್ತಿರುವ ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮರು ಹಾಕಿಕೊಟ್ಟ ಮಾರ್ಗವೇ ಕಾರಣ ಎಂದು ಅಪರ ಜಿಲ್ಲಾಧಿಾರಿ ಬಿ. ಸದಾಶಿವ ಪ್ರಭು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ವತಿಯಿಂದ ಶುಕ್ರವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳವಾಗಿ ಆಯೋಜಿಸಿದ್ದ ಭಗವಾನ್ ಶ್ರೀವಿಶ್ವಕರ್ಮ ಜಯಂತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಭಾರತದಲ್ಲಿ ಸಾವಿರಾರು ವರ್ಷಗಳಿಂದ ದೇವಸ್ಥಾನಗಳು, ಅರಮನೆ, ಕೋಟೆ ಕೊತ್ತಲುಗಳ ನಿರ್ಮಾಣ ಮಾಡಿದವರು, ಶಿಲ್ಪಕಲಾಕೃತಿ ಮತ್ತು ಪಂಚಲೋಹ ಕಲಾಕೃತಿಗಳಿಗೆ ಬುನಾದಿ ಹಾಕಿಕೊಟ್ಟವರು ವಿಶ್ವಕರ್ಮರು. ಇಂದಿಗೂ ದೇವಸ್ಥಾನಗಳ ನಿರ್ಮಾಣ, ಗೋಪುರಗಳು, ಮೂರ್ತಿ ನಿರ್ಮಾಣ, ಬೃಹತ್ ರಥಗಳ ನಿರ್ಮಾಣದಲ್ಲಿ ತೊಡಗಿಕೊಂಡಿರುವ ವಿಶ್ವಕರ್ಮ ಸಮಾಜ ನಮ್ಮ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡುತ್ತಿದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಡುಪಿ ಜಿಪಂ ಉಪಕಾರ್ಯದರ್ಶಿ ಕಿರಣ್ ಪಡ್ನೇಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಅಖಿಲ ಕರ್ನಾಟಕದ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಆಚಾರ್ಯ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ವಿಶ್ವನಾಥ್ ಆಚಾರ್ಯ, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ, ಕೆ.ಜೆ. ಗಣೇಶ್ ಆಚಾರ್ಯ, ಬಿ.ಎ. ಆಚಾರ್ಯ, ದಾಮೋದರ ಆಚಾರ್ಯ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು