ಬಂಟಕಲ್ಲಿನ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಉಡುಪಿ, ಸೆ.20: ಬಂಟಕಲ್ಲು ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಮಣ್ಣಿನ ತೇವಾಂಶ ಹಾಗೂ ತೇವಾಂಶ ಹಿಡಿದಿಡುವ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವರ್ಷದ ಅತ್ಯುತ್ತವು ಸಂಶೋಧನಾ ಪ್ರಶಸ್ತಿ ದೊರಕಿದೆ.
ಸಿವಿಲ್ ವಿಭಾಗದ ಪ್ರೊ.ಸುನಿಲ್ ಹಲ್ದಂಕರ್ ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ.ಸಚಿನ್ ಭಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಗಳಾದ ನವೀನ್ ಹೆಗಡೆ, ಹರ್ಷವರ್ಧನ ಎನ್., ಸೌರವ್ ಕೆ., ಮಹಮ್ಮದ್ ನೌಫಲ್ ಈ ಸಾಧನವನ್ನು ಅಭಿವೃದ್ದಿಪಡಿಸಿದ್ದಾರೆ.
ಕೃತಕ ಬುದ್ಧಿಮತ್ತೆಯನ್ನು ಬಳಸಿ ಅತಿ ಕಡಿಮೆ ವೆಚ್ಚದಲ್ಲಿ ಮಣ್ಣಿನ ಗುಣಲಕ್ಷಣ ಗಳನ್ನು ಸ್ಥಳದಲ್ಲೇ ಕಂಡುಹಿಡಿಯುವ ಈ ಯಂತ್ರದಿಂದ ಪರೀಕ್ಷೆಯ ಸಮಯ ವನ್ನು ಉಳಿಸಬಹುದಾಗಿದೆ. ಮಾತ್ರವಲ್ಲದೇ ಈಗ ಬಳಕೆಯಲ್ಲಿರುವ ಸಾಧನಕ್ಕಿಂತ ಆಧುನಿಕ ಸೆನ್ಸರುಗಳನ್ನು ಬಳಸಿ ತಯಾರಿಸಲಾದ ಈ ಸಾಧನವು ಹಗುರವಾಗಿದ್ದು ಈ ಸಾಧನವನ್ನು ಸುಲಭವಾಗಿ ಅತ್ತಿತ್ತ ಸಾಗಿಸಬಹುದಾಗಿದೆ.