ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟ ಸಮಾನ ಮನಸ್ಕರು
ಉಡುಪಿ, ಸೆ.21: ಉಳಿದುಕೊಳ್ಳಲು ಸೂಕ್ತ ಸೂರು ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಅಸಹಾಯಕ ಮಹಿಳೆಯೊಬ್ಬರಿಗೆ ಸಮಾನ ಮನಸ್ಕರು ಜೊತೆ ಸೇರಿಕೊಂಡು ಹೊಸ ಮನೆ ಕಟ್ಟಿ ಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಕ್ಕೆಹಳ್ಳಿ ಸಮೀಪದ ಜಯಲಕ್ಷ್ಮೀ ಆಚಾರ್ಯ ಎಂಬವರ ಮನೆ ಸಂಪೂರ್ಣ ಶೀಥಿಲಾವಸ್ಥೆಯಲ್ಲಿದ್ದು ಆಕೆಗೆ ಕೆಲವೊಂದು ಸಮಾನ ಮನಸ್ಕರು ಸೇರಿಕೊಂಡು ಮನೆಯನ್ನು ನಿರ್ಮಿಸಿ ಕೊಡುವ ನಿರ್ಧಾರ ಕೈಗೊಂಡಿದ್ದರು. ಅದರಂತೆ ಆ ಮನೆಯ ಹಸ್ತಾಂತರ ಕಾರ್ಯಕ್ರಮ ರವಿವಾರ ಸರಳ ರೀತಿಯಲ್ಲಿ ನೇರವೇರಿತು.
ಪುರೋಹಿತರಾದ ಕಟಪಾಡಿ ಶಶಿಧರ ಆಚಾರ್ಯ ಗೃಹ ಪ್ರವೇಶದ ಪ್ರಯುಕ್ತ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಊರಿನ ದಾನಿಗಳಿಂದ ಆರ್ಥೀಕ ನೆರವು ಮಾತ್ರವಲ್ಲದೆ ವಸ್ತುರೂಪದಲ್ಲಿ ಕೂಡ ನೆರವನ್ನು ಪಡೆದು ಮನೆಯನ್ನು ನಿರ್ಮಿಸಲಾಗಿದೆ. ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ ಸಮಾನ ಮನಸ್ಕ ತಂಡದ ಸದಸ್ಯರನ್ನು ಜಯಲಕ್ಷ್ಮೀ ಆಚಾರ್ಯ ಸನ್ಮಾನಿಸಿದರು.
ಈ ವೇಳೆ ಶಿಲ್ಪಿ ಮಾಧವ ಆಚಾರ್ಯ, ಶೇಖರ ಆಚಾರ್ಯ ಕುಕ್ಕೆಹಳ್ಳಿ, ಎಸ್ ಜಿಕೆ ಕೋಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.