ಪಠ್ಯದ ಕಲಿಕೆಯ ಜೊತೆಗೆ ಜೀವನ ಕೌಶಲ್ಯದ ಅಭಿವೃದ್ಧಿ ಇಂದಿನ ಅಗತ್ಯ : ಖಾಸಿಮ್ ಅಹ್ಮದ್
ಮಂಗಳೂರು : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಪಠ್ಯದ ಕಲಿಕೆಯ ಜೊತೆಗೆ ಜೀವನ ಕೌಶಲಗಳನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ ಎಂದು ಮಂಗಳೂರಿನ ಹಿದಾಯ ಫೌಂಡೇಶನ್ ಸ್ಥಾಪಕಾಧ್ಯಕ್ಷ ಖಾಸಿಮ್ ಅಹ್ಮದ್ ಎಚ್.ಕೆ. ಅಭಿಪ್ರಾಯಪಟ್ಟರು.
ಅವರು ನೀಟ್/ಸಿಇಟಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡಮಿ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವಾಸ್ತವ ಭ್ರಮೆ ಮತ್ತು ಆಕರ್ಷಣೆಗಳಿಗೆ ಒಳಗಾಗದೆ ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮರ್ಥ್ಯದ ಮೇಲೆ ಕರಿಯರ್ ಪ್ಲ್ಯಾನಿಂಗ್ ಮಾಡಿಕೊಂಡು ಕಲಿತಾಗ ಮಾತ್ರ ಯುವ ಸಮೂಹ ಗೊಂದಲಗಳಿಂದ ಹೊರಬರಬಹುದು ಎಂದು ಖಾಸಿಮ್ ತಿಳಿಸಿದರು.
ದಿ ಕ್ಯಾಂಪಸ್ ಕರಿಯರ್ ಅಕಾಡಮಿಯ ನಿರ್ದೇಶಕ ಉಮರ್ ಯು.ಎಚ್. ಸಿಇಟಿ/ನೀಟ್ ಆನ್'ಲೈನ್ ಕೌನ್ಸಿಲಿಂಗ್ ವಿಧಾನ ಮತ್ತು ಹಂತಗಳು, ದಾಖಲೆಗಳ ಪರಿಶೀಲನೆ, ಲಭ್ಯವಿರುವ ವಿವಿಧ ವಿಭಾಗದ ಸೀಟುಗಳು ಹಾಗೂ ಕರಿಯರ್ ಆಯ್ಕೆಯ ಅಗತ್ಯತೆ ಮತ್ತು ವಿಧಾನಗಳ ಕುರಿತಂತೆ ಸಮಗ್ರ ಮಾರ್ಗದರ್ಶನ ನೀಡಿದರು.