ಬ್ಯಾರಿ ಭಾಷಾ ದಿನಾಚರಣೆ ಅಂಗವಾಗಿ ಗಾಯನ, ಪ್ರಬಂಧ ವಾಚನ ಸ್ಪರ್ಧೆಗೆ ಅರ್ಜಿ ಆಹ್ವಾನ
ಮಂಗಳೂರು, ಸೆ.22: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಅ.3ರಂದು ಅಪರಾಹ್ನ 2ಗಂಟೆಗೆ ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಬ್ಯಾರಿ ಭಾಷಾ ದಿನಾಚರಣೆ ಅಂಗವಾಗಿ ಬ್ಯಾರಿ ಗಾಯನ ಸ್ಪರ್ಧೆ ಹಾಗೂ ಬ್ಯಾರಿ ಪ್ರಬಂಧ ಸ್ಪರ್ಧೆಯನ್ನು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ.
ಗಾಯನ ಸ್ಪರ್ಧೆ: ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡೆಯುವ ಗಾಯನ ಸ್ಪರ್ಧೆಯು ಬ್ಯಾರಿ ಭಾಷೆ, ಕಲೆ, ಸಂಸ್ಕೃತಿಗೆ ಒಳಗೊಂಡ ಪದ್ಯವಾಗಿರತಕ್ಕದ್ದು.
ಪ್ರಬಂಧ ವಾಚನ ಸ್ಪರ್ಧೆ: ಸಾರ್ವಜನಿಕ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಪ್ರಬಂಧ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಹಿಳೆಯರು 'ಬ್ಯಾರಿ ಭಾಷೆಯ ಅಭಿವೃದ್ಧಿಗೆ ಮಹಿಳೆಯರ ಪಾತ್ರ' ಎಂಬ ವಿಷಯದಲ್ಲಿ ಹಾಗೂ ಪುರುಷರು ಱಬ್ಯಾರಿ ಭಾಷೆಯ ಬೆಳವಣಿಗೆಗೆ ನಾವೇನು ಮಾಡಬೇಕು' ಎಂಬ ವಿಷಯದಲ್ಲಿ ಪ್ರಬಂಧ ವಾಚಿಸಬೇಕು.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ತಮ್ಮ ಮೊಬೈಲ್ನಲ್ಲಿ ಗಾಯನ/ ಪ್ರಬಂಧ ವಾಚಿಸಿದ ವೀಡಿಯೋವನ್ನು ಸೆ.28 ರೊಳಗೆ ಅಕಾಡಮಿಯ ಮೊಬೈಲ್ ಸಂಖ್ಯೆ: 7483946578 ಗೆ ವಾಟ್ಸಾಪ್ ಮಾಡಬೇಕು. ಗಾಯನ ಮತ್ತು ಪ್ರಬಂಧದ ಅವಧಿಯು ಮೂರು ನಿಮಿಷಕ್ಕೆ ಸೀಮಿತವಾಗಿರುತ್ತದೆ. ಟ್ರಾಕ್ ಮತ್ತು ಸಂಗೀತ ರಹಿತವಾಗಿರಬೇಕು. ಗಾಯನ ಮಾಡುವ ಮತ್ತು ಪ್ರಬಂಧ ವಾಚಿಸುವ ಮುನ್ನ ತಮ್ಮ ಹೆಸರು ಮತ್ತು ಊರಿನ ಹೆಸರನ್ನು ಹೇಳಿಕೊಂಡು ಪದ್ಯವನ್ನು ಪ್ರಾರಂಭಿಸತಕ್ಕದ್ದು.
ಈ ವಿಭಾಗದಲ್ಲಿ ವಿಜೇತರಿಗೆ ಪ್ರಥಮ 3,000 ರೂ, ದ್ವಿತೀಯ 2,000ರೂ, ತೃತೀಯ 1,000 ರೂ. ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಸಾರ್ವಜನಿಕರಿಗೆ ಅವಕಾಶವಿದೆ. ಎಲ್ಲಾ ಭಾಷೆ ಮತ್ತು ಧರ್ಮದವರು ಪಾಲ್ಗೊಳ್ಳಬಹುದು ಎಂದು ರಿಜಿಸ್ಟ್ರಾರ್ ಪೂರ್ಣಿಮಾ ತಿಳಿಸಿದ್ದಾರೆ.