ನಾಪತ್ತೆಯಾಗಿದ್ದ ಉಪ್ಪಿನಂಗಡಿಯ ರಫೀಕ್ ಖಾನ್ಗೆ ಉಗ್ರರ ಸಂಪರ್ಕ ಎಂಬ ಮಾಧ್ಯಮ ವರದಿಗಳು ಸತ್ಯಕ್ಕೆ ದೂರ: ದ.ಕ. ಎಸ್ಪಿ
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ
ಮಂಗಳೂರು, ಸೆ.23: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಉಗ್ರರ ಸಂಪರ್ಕ ಹೊಂದಿದ್ದನೆಂಬ ಕುರಿತು ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದದ್ದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಪುತ್ತೂರಿನ ನೆಕ್ಕಿಲಾಡಿಯ ‘ಎ ಟು ಝೆಡ್’ ಗ್ಯಾರೇಜ್ ಮಾಲಕ ಮುಹಮ್ಮದ್ ರಫೀಕ್ ಖಾನ್ ಎಂಬವರು ಜುಲೈ 12ರಂದು ಬೆಂಗಳೂರಿಗೆ ತೆರಳಿ ವಾಹನದ ಬಿಡಿಭಾಗಗಳನ್ನು ತರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆಂದು ಪತ್ನಿ ಫಾತಿಮಾ (34) ಎಂಬವರು ಆಗಸ್ಟ್ 6ರಂದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಸದ್ಯ ಆತ ಉತ್ತರ ಭಾರತದಲ್ಲಿ ಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಪೊಲೀಸರು ಕೇಸನ್ನು ಮುಕ್ತಾಯಗೊಳಿಸಿದ್ದಾರೆ.
(ಸೆ.22ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ವರದಿ)
ಇತ್ತೀಚೆಗೆ ನಾಪತ್ತೆಯಾಗಿದ್ದ ಮುಹಮ್ಮದ್ ರಫೀಕ್ ಖಾನ್ ಉತ್ತರ ಭಾರತದಲ್ಲಿ ಬಂಧಿತರಾದ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಸ್ಥಳೀಯ ಪತ್ರಿಕೆ, ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಸಾರವಾದ ವಿಷಯವು ಸತ್ಯಕ್ಕೆ ದೂರವಾದ ಸಂಗತಿಯಾಗಿರುತ್ತದೆ ಎಂದು ಎಸ್ಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
(ಸೆ.21ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ)