ನಮ್ಮ ನಾಡ ಒಕ್ಕೂಟದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಉಡುಪಿ, ಸೆ.25: ನಮ್ಮ ನಾಡ ಒಕ್ಕೂಟ ಉಡುಪಿ ಘಟಕದ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ನಗರದ ಹೊಟೇಲ್ ವೈಟ್ ಲೋಟಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಮಾತನಾಡಿ, ಆ ಬಾರಿ ಜಿಲ್ಲೆಯಲ್ಲಿ 14-15 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅದರಲ್ಲಿ ಕೆಲವು ಮಕ್ಕಳಿಗೆ ಆನ್ ಲೈನ್ ತರಗತಿಗಾಗಿ ಮೊಬೈಲ್ಗಳ ಅವಶ್ಯಕತೆ ಇದೆ. ಆದುದರಿಂದ ಇಂತಹ ಸಂಘಟನೆಗಳು ಬಡ ಮಕ್ಕಳಿಗೆ ಮೊಬೈಲ್ ವಿತರಿಸುವ ಮೂಲಕ ಶಿಕ್ಷಣ ಕ್ರಾಂತಿಗೆ ಸಹಕರಿಸಬೇಕು ಎಂದರು.
ಒಕ್ಕೂಟದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ, ಜಿಲ್ಲಾಧ್ಯಕ್ಷ ಮುಶ್ತಾಕ್ ಅಹ್ಮದ್ ಬೆಳ್ವೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌಲಾನ ಝಮೀರ್ ಅಹ್ಮದ್ ರಶಾದಿ ಉಪಸ್ಥಿತರಿದ್ದರು.
ಉಡುಪಿ ಘಟಕದ ಅಧ್ಯಕ್ಷ ನಜೀರ್ ಸಾಹೇಬ್ ನೇಜಾರ್ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಎಸ್.ಎಂ.ಇರ್ಷಾದ್ ನೇಜಾರ್ ವಂದಿಸಿದರು. ಉಸ್ತಾದ್ ಸಾಧಿಕ್ ಕಾರ್ಯಕ್ರಮ ನಿರೂಪಿಸಿದರು.