ಉಪ್ಪಿನಂಗಡಿ: ಅಸ್ಸಾಂ ಘಟನೆ ಖಂಡಿಸಿ ಪಿಎಫ್ಐ ಪ್ರತಿಭಟನೆ
ಉಪ್ಪಿನಂಗಡಿ: ಅಸ್ಸಾಂನಲ್ಲಿ ಪ್ರತಿಭಟನಾಕಾರರ ಮೇಲೆ ದಾಳಿ ಹಾಗೂ ದಾರುಣ ಹತ್ಯೆ ನಡೆಸಿರುವ ಅಸ್ಸಾಂ ರಾಜ್ಯ ಸರಕಾರ ಮತ್ತು ಪೊಲೀಸರ ನಡೆಯನ್ನು ಖಂಡಿಸಿ ಉಪ್ಪಿನಂಗಡಿಯಲ್ಲಿ ಸೆ. 25ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.
ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಸ್ಸಾಂನಲ್ಲಿ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿರುವ ಅಸ್ಸಾಂ ರಾಜ್ಯ ಸರಕಾರ ಮತ್ತು ಅಲ್ಲಿನ ಪೊಲೀಸರ ವಿರುದ್ಧ ಘೋಷಣೆ ಕೂಗಿ, ಈ ಕೃತ್ಯವನ್ನು ಖಂಡಿಸಿದರು.
ಇಮಾಂ ಕೌನ್ಸಿಲ್ ಆಲ್ ಇಂಡಿಯಾ ಅಧ್ಯಕ್ಷ ಜಾಫರ್ ಇಮಾಂ ಫೈಝಿ ಮತ್ತು ಪಿ.ಎಫ್.ಐ. ನೆಕ್ಕಿಲಾಡಿ ಡಿವಿಜನ್ ಕಾರ್ಯದರ್ಶಿ ಸಮದ್ ಶಾಂತಿನಗರ ಮಾತನಾಡಿ, ದೇಶದಲ್ಲಿ 2014ರ ಬಳಿಕ ಬಂದ ಕೋಮುವಾದಿ ಸರಕಾರ ದೇಶದ ಎಲ್ಲೆಡೆಯಲ್ಲಿ ಕರಾಳತೆಯನ್ನು ತಂದಿಟ್ಟಿದೆ. ಅದರ ಭಾಗವಾಗಿ ಅಸ್ಸಾಂನಲ್ಲಿ ದ್ವೇಷ ರಾಜಕೀಯದೊಂದಿಗೆ ಮುಸ್ಲಿಂ ಸಮುದಾಯದ ಮೇಲೆ ದಾಳಿ, ದಾರುಣ ಹತ್ಯೆ ನಡೆಯುತ್ತಿದ್ದು, ಇದು ಖಂಡನೀಯವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜಿಸ್ಟಿಕ್ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪದಾಧಿಕಾರಿಗಳಾದ ಸುಲೈಮಾನ್ ಕೊಳ್ಳೇಜಾಲ್, ಝಕರಿಯಾ ಕೊಡಿಪ್ಪಾಡಿ, ಅಬ್ದುಲ್ ರಹಿಮಾನ್ ಹಾಜಿ, ಮುಸ್ತಫಾ ಜಿ.ಎನ್., ಯೂಸುಫ್ ಬೇರಿಕೆ, ರಜಾಕ್ ಕುದ್ರಡ್ಕ, ರಶೀದ್ ಮಠ, ಕಿಲರ್ ಕೆಮ್ಮಾರ, ಆದಂ ಬಾವಾ ಪಂಜಾಳ, ಸಿದ್ದಿಕ್ ನೆಲ್ಯಾಡಿ, ಉಸ್ಮಾನ್ ನೆಲ್ಯಾಡಿ, ಹನೀಫ್ ಬಿಳಿಯೂರು ಉಪಸ್ಥಿತರಿದ್ದರು. ಇಕ್ಬಾಲ್ ಕೆಂಪಿ ಸ್ವಾಗತಿಸಿ, ವಂದಿಸಿದರು.