ಮಂಜೇಶ್ವರ; ಮಾದಕ ವಸ್ತು ಸಾಗಾಟ : ಬೈಕ್ ಸಹಿತ ಇಬ್ಬರು ಆರೋಪಿಗಳ ಸೆರೆ
ಮಂಜೇಶ್ವರ: ಬೈಕ್ ನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಮಾದಕ ವಸ್ತು ಹಾಗೂ ಗಾಂಜಾವನ್ನು ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಪೈವಳಿಕೆ ಬಾಯಿಕಟ್ಟೆಯ ಸಮೀರ್ (22) ಮತ್ತು ರಿಯಾಝ್ (28) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀರ್ ಚಲಾಯಿಸುತ್ತಿದ್ದ ಬೈಕ್ ನಿಂದ 51 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ರಿಯಾಝ್ ಚಲಾಯಿಸುತ್ತಿದ್ದ ಬೈಕ್ ನಿಂದ ಸುಮಾರು 3 ಕಿಲೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಾಸರಗೋಡು ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು, ಪೈವಳಿಕೆ ಬಾಯಿಕಟ್ಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ದಾರಿಯಾಗಿ ಬಂದ ಬೈಕ್ ಗಳನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.