ಉಡುಪಿ ತಾಲೂಕು ಮುಸ್ಲಿಮ್ ಒಕ್ಕೂಟದಿಂದ ಗಣ್ಯರ ಸಮಾವೇಶ
ಉಡುಪಿ, ಅ.16: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ಗಣ್ಯರ ಸಮಾವೇಶವು ಉಡುಪಿ ಪುರಭವನದಲ್ಲಿ ಶನಿವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಹಿದಿನಬ್ಬ ವಕ್ಫ್ ಬೋರ್ಡ್ನಿಂದ ಸಿಗುವ ಸವಲತ್ತುಗಳು ಮತ್ತು ಅದನ್ನು ಪಡೆದುಕೊಳ್ಳುವ ರೀತಿ ಬಗ್ಗೆ, ಯಾಸೀನ್ ಕೋಡಿಬೆಂಗ್ರೆ ಭಾರತದ ಸಂವಿಧಾನದ ರೂಪುರೇಷೆ ಮತ್ತು ನಾಗರಿಕ ಕಾಯ್ದೆ ಕಾನೂನುಗಳ ಪ್ರಾಥಮಿಕ ಮಾಹಿತಿ ಹಾಗೂ ರಫೀಕ್ ಮಾಸ್ಟರ್ ವ್ಯಕ್ತಿತ್ವ ವಿಕಸನದ ಕುರಿತು, ಒಕ್ಕೂಟದ ಉಪಾಧ್ಯಕ್ಷ ಇದ್ರೀಸ್ ಹೂಡೆ ಇಸ್ಲಾಮಿನ ಸಂಘಟನಾತ್ಮಕ, ಆಡಳಿತಾತ್ಮಕ ಇತಿಹಾಸದ ವಿವರಣೆ ಕುರಿತು ಮಾತನಾಡಿದರು.
ವೈದ್ಯ ಡಾ. ಮುಹಮ್ಮದ್ ರಫೀಕ್ ಅವರನ್ನು ಒಕ್ಕೂಟದ ಸ್ಥಾಪಕಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ ಸನ್ಮಾನಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಥಿತಿಗಳಾಗಿ ಒಕ್ಕೂಟದ ಉಪಾಧ್ಯಕ್ಷ ಅನ್ವರ್ ಅಲಿ ಕಾಪು, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಕ್ರಮ್ ಮೌಲಾ, ಹಾಜಿ ಟಿ.ಎಸ್.ಬುಡಾನ್ ಬಾಷಾ ಸಾಹೇಬ್ ಉಪಸ್ಥಿತರಿದ್ದರು.
ಒಕ್ಕೂಟದ ಉಡುಪಿ ತಾಲೂಕು ಅಧ್ಯಕ್ಷ ಝಫ್ರುಲ್ಲಾಹ್ ಟಿ.ಎಂ. ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸದಸ್ಯ ನಿಸಾರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಘಟಕದ ಕಾರ್ಯದರ್ಶಿ ಅಬ್ದುಲ್ ರಝಾಕ್ ವಂದಿಸಿದರು.