ಕೊರಗ ಕಾಲನಿಯ ಫಾನುಭವಿಗಳಿಗೆ ಕೋಳಿ ಘಟಕ ವಿತರಣೆ
ಉಡುಪಿ, ಅ.16: ಉಡುಪಿ ಜಿಲ್ಲಾ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ 38ನೆ ಕಳತ್ತೂರು ಗ್ರಾಪಂ ಇವುಗಳ ಆಶ್ರಯದಲ್ಲಿ ಕೆಂಜೂರು ಕಲ್ಲುಗುಡ್ಡೆ ಕೊರಗ ಕಾಲನಿಯ ಸಂಜೀವಿನಿ ಸ್ವಸಹಾಯ ಸಂಘಗಳ 10 ಫಲಾನುಭವಿಗಳಿಗೆ ಕೋಳಿ ಘಟಕ ವಿತರಣಾ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉಧ್ಘಾಟಿಸಿ ಫಲಾನುಭವಿಗಳಿಗೆ ಘಟಕ ಹಸ್ತಾಂತರಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಕೊರಗ ಸಮುದಾಯದವರು ತಮ್ಮ ಸಾಂಪ್ರದಾಯಿಕ ಕಸುಬಿನೊಂದಿಗೆ ಇಂತಹ ಆರ್ಥಿಕ ಬಲವರ್ಧನೆಯ ಚಟುವಟಿಕೆಗಳನ್ನು ನಡೆಸುವ ಮೂಲಕ ಮಹಿಳೆಯರು ಕೂಡ ಸದೃಢರಾಗಿ ಸಮಾಜಕ್ಕೆ ಮಾದರಿಯಾಗಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ಕಳತ್ತೂರು ಗ್ರಾಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಕಳತ್ತೂರು ಗ್ರಾಪಂ ಉಪಾಧ್ಯಕ್ಷ ನವೀನ ಕುಮಾರ್, ಸದಸ್ಯರಾದ ಆದರ್ಶ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಮಂಜುಳಾ ನಾಯ್ಕ್, ಉಷಾ, ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ, ಕಳತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬನಶಂಕರಿ, ಕೊಕ್ಕರ್ಣೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಿರಿಯಣ್ಣ ಶೆಟ್ಟಿ, ಕೊರಗ ಮುಖಂಡರಾದ ಬೊಗ್ರ, ಗೌರಿ, ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ಅಮ್ಮಣ್ಣಿ, ಸ್ಫೂರ್ತಿ ಸಂಜೀವಿನಿ ಸಂಘದ ಅಧ್ಯಕ್ಷೆ ಗಿರಿಜಾ, ಸಂಕಲ್ಪ ಸಂಜೀವಿನಿ ಸಂಘದ ಅಧ್ಯಕ್ಷೆ ಶಾಂತಾ ಬಾಯಿ ಉಪಸ್ಥಿತರಿದ್ದರು.
ಎನ್ಆರ್ಎಲ್ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವ್ಯಸ್ಥಾಪಕಅವಿನಾಶ್ ಸ್ವಾಗತಿಸಿ, ನವ್ಯಾ ವಂದಿಸಿದರು.